
ಗೋಕಾಕ: ಹಲಗಾ-ಮಚ್ಚೆ ಬೈಪಾಸ್ ರಸ್ತೆ ಕಾಮಗಾರಿ ನಡೆಸಲು ಉಂಟಾಗಿರುವ ಸಮಸ್ಯೆಯನ್ನು ಜಿಲ್ಲಾಧಿಕಾರಿಗಳು ರೈತರೊಂದಿಗೆ ಚರ್ಚಿಸಿ ಬಗೆಹರಿಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.
ಇಲ್ಲಿನ ಹಿಲ್ ಗಾರ್ಡನ್ ಗೃಹಕಚೇರಿಯಲ್ಲಿ ಶುಕ್ರವಾರದಂದು ಪತ್ರಕರ್ತರೊಂದಿಗೆ ಮಾತನಾಡಿದ ಅವರು, ರೈತರ ಪ್ರತಿಭಟನೆಯ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ. ಆದರೆ, ಜಿಲ್ಲಾಧಿಕಾರಿಗಳು ರೈತರು ಹಾಗೂ ಸಂಬAಧಪಟ್ಟ ಅಧಿಕಾರಿಗಳನ್ನು ಕರೆದು ಸಭೆ ನಡೆಸಿ, ಸಂಧಾನದ ಮೂಲಕ ಸಮಸ್ಯೆ ಪರಿಹರಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಚೇರಿಗಳ ಸ್ಥಳಾಂತರದಿAದ ಜನಸಾಮಾನ್ಯರಿಗೆ ತೊಂದರೆ: ಬೆಳಗಾವಿ ನಗರದಲ್ಲಿರುವ ಸರ್ಕಾರಿ ಕಚೇರಿಗಳನ್ನು ಸುವರ್ಣಸೌಧಕ್ಕೆ ಸ್ಥಳಾಂತರ ಮಾಡುವುದರಿಂದ ಜನಸಾಮಾನ್ಯರಿಗೆ ಮತ್ತಷ್ಟು ತೊಂದರೆಯಾಗಲಿದೆ. ಏಕೆಂದರೆ ನಗರದಿಂದ ಬಸ್ ಮೂಲಕ ಅಲ್ಲಿಗೆ ಹೋಗಬೇಕಾಗುತ್ತದೆ. ಬೇರೆ ಊರುಗಳಿಂದ ನಗರಕ್ಕೆ ಬಂದು, ಇಲ್ಲಿಂದ ಮತ್ತೆ ಅಲ್ಲಿ ಹೋಗಬೇಕಾಗುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗಲಿದೆ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.
ಸಂಸದರು ರಾತ್ರಿಯೆಲ್ಲಾ ಸ್ಟಡಿ ಮಾಡಿರಬಹುದು: ಮೈಸೂರು ಸಂಸದರು ‘ಬಿಟ್ ಕಾಯಿನ್’ ಬಗ್ಗೆ ರಾತ್ರಿಯೆಲ್ಲ ಸ್ಟಡಿ ಮಾಡಿರಬಹುದು. ಹೀಗಾಗಿ, ‘ಬಿಟ್ ಕಾಯಿನ್’ ಎಂದರೆ ಏನು ಹೇಳಿ ಎಂದು ಕಾಂಗ್ರೆಸ್ ನಾಯಕರನ್ನು ಕೇಳುತ್ತಿದ್ದಾರೆ. ಎಲ್ಲಾನು ಎಲ್ಲರಿಗೂ ಗೊತ್ತಿರುವುದಿಲ್ಲ. ಏಕಾಏಕಿ ಅದರ ಬಗ್ಗೆ ಹೇಳಿ ಎಂದರೆ ಎಲ್ಲ ರಾಜಕಾರಣಿಗಳಿಗೂ ಹೇಳಲು ಆಗುವುದಿಲ್ಲ. ‘ಬಿಟ್ ಕಾಯಿನ್’ ಎಂಬುದನ್ನು ದೇಶದಲ್ಲಿ ಹೊಸದಾಗಿ ಕೇಳುತ್ತಿದ್ದೇವೆ. ಇನ್ನು ಮುಂದೆ ಎಲ್ಲರು ತಿಳಿದುಕೊಳ್ಳಲು ಪ್ರಯತ್ನ ಮಾಡುತ್ತಾರೆ ಎಂದು ಸತೀಶ ಪರೋಕ್ಷವಾಗಿ ಪ್ರತಾಪ್ ಸಿಂಹ ಗೆ ಟಾಂಗ್ ನೀಡಿದರು.
‘ಬಿಟ್ ಕಾಯಿನ್’ ಆರೋಪ, ಪ್ರತ್ಯಾರೋಪದಿಂದ ಯಾವುದೇ ಪ್ರಯೋಜನವಿಲ್ಲ. ಈ ಬಗ್ಗೆ ಕೂಡಲೇ ತನಿಖೆ ಕೈಗೊಂಡು, ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಹೇಳಿದರು.
ಸಭೆಯಲ್ಲಿ ತೀರ್ಮಾನ: ವಿಧಾನ ಪರಿಷತ್ ಚುನಾವಣೆಯ ಅಭ್ಯರ್ಥಿಗಳ ಆಯ್ಕೆ ಕುರಿತು ನ.೧೪ ರಂದು ಬೆಂಗಳೂರಿನಲ್ಲಿ ಕೆಪಿಸಿಸಿಯಿಂದ ಸಭೆ ಕರೆಯಲಾಗಿದೆ. ಈ ಬಗ್ಗೆ ಸಭೆಯಲ್ಲಿ ಪಕ್ಷದ ನಾಯಕರು ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಸತೀಶ ತಿಳಿಸಿದರು.
YuvaBharataha Latest Kannada News