ಕರುನಾಡ ಅರ್ಭಟಕ್ಕೆ ಮೋದಿ

ಮಂಗಳೂರು :
ಕರ್ನಾಟಕ ವಿಧಾನ ಸಭಾ ಚುನಾವಣಾ ಕಣ ರಂಗೇರಿದೆ. ಬಿರುಸಿನಿಂದ ಚುನಾವಣಾ ತಯಾರಿಗಳು ನಡೆಯುತ್ತಿದೆ. ಈ ನಡುವೆ ಬಿಜೆಪಿ ಸ್ಟಾರ್ ಪ್ರಚಾರಕರಲ್ಲಿ ಕರಾವಳಿ ಜಿಲ್ಲೆಗೆ ಪ್ರಧಾನಿ ಮೋದಿ ಮತ್ತು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಬಿಜೆಪಿ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರ ನಡೆಸಲಿದ್ದಾರೆ.
ಮೇ 3 ರಂದು ಮುಲ್ಕಿಗೆ ಪ್ರಧಾನಿ ನರೇಂದ್ರ ಮೋದಿ ಬರುತ್ತಾರೆ. ಬಹುತೇಕ ಅವರ ಆಗಮನ ಖಚಿತವಾಗಿದೆ, ಅಂತಿಮ ಮಾಹಿತಿ ಬರಬೇಕು. ಮೇ 6 ರಂದು ದ.ಕ ಜಿಲ್ಲೆಗೆ ಯೋಗಿ ಆದಿತ್ಯನಾಥ್ ಬರುತ್ತಾರೆ. ಆದರೆ ಯೋಗಿಯವರ ಕಾರ್ಯಕ್ರಮದ ಜಾಗ ನಿಗದಿಯಾಗಿಲ್ಲ. ಉಡುಪಿ ಮತ್ತು ದ.ಕ ಜಿಲ್ಲೆ ಕೇಂದ್ರೀಕರಿಸಿ ಸಮಾವೇಶಗಳು ನಡೆಯಲಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಕರಾವಳಿಯ 19 ಸೀಟ್ ಬಿಜೆಪಿ ಗೆಲ್ಲುತ್ತದೆ ಎಂದು ಭವಿಷ್ಯ ನುಡಿದಿರುವ ಕೋಟ ಶ್ರೀನಿವಾಸ ಪೂಜಾರಿ, ಹಿಂದುತ್ವ ನಮ್ಮ ಅಜೆಂಡಾಗಳಲ್ಲಿ ಒಂದು, ಅದನ್ನು ಪ್ರಶ್ನೆ ಮಾಡುವ ಹಕ್ಕು ಯಾರಿಗೂ ಇಲ್ಲ. ಈ ಬಾರಿ ದ.ಕ ಜಿಲ್ಲೆಯಲ್ಲಿ ಎಂಟೂ ಕ್ಷೇತ್ರ ನಾವೇ ಗೆಲ್ಲುತ್ತೇವೆ. ಡಿಕೆಶಿ ಹೇಳುವ ಕರಾವಳಿಯ ಗೆಲ್ಲುವ ಹತ್ತು ಕ್ಷೇತ್ರ ಯಾವುದು ಎಂಬುದು ನಮಗೆ ಗೊತ್ತಿಲ್ಲ. ಪಕ್ಷದ ವಿರುದ್ದ ಬಂಡಾಯ ಹೋದವರು ನಮ್ಮ ಜೊತೆ ಬರುತ್ತಾರೆ ಎನ್ನುವ ವಿಶ್ವಾಸ ಇದೆ ಎಂದಿದ್ದಾರೆ.
ಪುತ್ತೂರು ಸೇರಿದಂತೆ ಎಲ್ಲವನ್ನೂ ಬಿಜೆಪಿಯೇ ಗೆಲ್ಲಲಿದೆ. ಬಿಜೆಪಿ ಗೆಲ್ಲುತ್ತದೆ ಅಂದಾಗ ಉಳಿದವರು ಸೋಲುತ್ತಾರೆ ಎಂದು ಅರ್ಥ. ಅದರಲ್ಲಿ ಪುತ್ತೂರು ಬಿಜೆಪಿ ಬಂಡಾಯ ಅಭ್ಯರ್ಥಿ ಅರುಣ್ ಪುತ್ತಿಲ ಅಥವಾ ಬೇರೆಯವರ ಚರ್ಚೆ ಇಲ್ಲ. ಬಂಡಾಯ ಹೋದವರು ನಮ್ಮ ಜೊತೆ ಬರುವ ವಿಶ್ವಾಸ ಇದೆ. ರಾಜಕಾರಣದಲ್ಲಿ ಯಾರು ಯಾರ ಮೇಲೂ ಏನು ಬೇಕಾದರೂ ಮಾಡಬಹುದು. ಹಾಗಾಗಿ ಕೆಲವು ನಾಯಕರು ನ್ಯಾಯಾಲಯದ ತಡೆಯಾಜ್ಞೆ ತಂದಿದ್ದಾರೆ. ಅದು ಅವರವರ ಖಾಸಗಿ ಬದುಕು, ಹೀಗಾಗಿ ನಾವು ಏನೂ ಮಾಡಲು ಆಗಲ್ಲ. ದ.ಕ ಜಿಲ್ಲೆಗೆ ಹಲವು ರಾಷ್ಟ್ರೀಯ ನಾಯಕರು ಪ್ರಚಾರಕ್ಕೆ ಬರುತ್ತಾರೆ ಎಂದಿದ್ದಾರೆ.
YuvaBharataha Latest Kannada News