ಭಯೋತ್ಪಾದನಾ ಕೃತ್ಯಕ್ಕೆ ಹಣಬಳಕೆ ಆರೋಪ : 16 ಕಡೆ ಬೆಳ್ಳಂಬೆಳಿಗ್ಗೆ ಎನ್ಐಎ ದಾಳಿ

ಯುವ ಭಾರತ ಸುದ್ದಿ ಮಂಗಳೂರು :
ಮಂಗಳೂರು, ಪುತ್ತೂರು, ಬೆಳ್ತಂಗಡಿ, ಉಪ್ಪಿನಂಗಡಿ, ವೇಣೂರು, ಬಂಟ್ವಾಳಗಳಲ್ಲಿ ಮನೆ, ಕಚೇರಿ, ಆಸ್ಪತ್ರೆಗಳು ಸೇರಿದಂತೆ 16 ಕಡೆಗಳಲ್ಲಿಇಂದು ಬೆಳಿಗ್ಗೆ ಎನ್ ಐಎ ದಾಳಿ ನಡೆಸಿದೆ.. ಎನ್ಐಎ ಅಧಿಕಾರಿಗಳು ಹಲವು ದಾಖಲೆಗಳ ಪರಿಶೀಲನೆಯನ್ನು ನಡೆಸಿದ್ದು, ಈ ವೇಳೆ ಹಲವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ.
ಕೇರಳ, ಬಿಹಾರದಲ್ಲೂ ದಾಳಿ ನಡೆದಿದೆ ಎಂದು ವರದಿಯಾಗಿದೆ. ಬಿಹಾರದ ಫುಲ್ವಾರಿ ಶರೀಫಗೆ ಸಂಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ದಾಳಿ ನಡೆದಿದೆ ಎನ್ನಲಾಗಿದೆ. ನಿಷೇಧಿತ ಪಿಎಫ್ಐ ನಡೆಸುತ್ತಿದ್ದ ಹಲವು ಕೃತ್ಯಗಳಿಗೆ ಸಂಬಂಧಿಸಿದಂತೆ ಎನ್ಐಎ ಕಳೆದ ವರ್ಷದಿಂದಲೇ ತೀವ್ರ ವಿಚಾರಣೆ ನಡೆಸುತ್ತಿದ್ದು, ಇದರ ಮುಂದುವರಿದ ಭಾಗವಾಗಿ ದಾಳಿ ನಡೆದಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಹತ್ಯೆಗೆ ಸಂಚು ರೂಪಿಸಿರುವುದು ಸೇರಿದಂತೆ ಹಲವು ವಿಚಾರಗಳಿಗೆ ಇಲ್ಲಿ ಫಂಡಿಂಗ್ ನಡೆಯುತ್ತಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ. ಈ ಹಿನ್ನೆಲೆ ಬುಧವಾರ ಬೆಳಿಗ್ಗೆ 16 ಕಡೆಗಳಲ್ಲಿ ದಾಳಿ ನಡೆದಿದೆ ಎಂದು ತಿಳಿದು ಬಂದಿದೆ.
ಬಿಹಾರದ ಪಾಟ್ನಾದಲ್ಲಿ ಕಳೆದ ವರ್ಷ ಜುಲೈ ತಿಂಗಳಿನಲ್ಲಿ ಪುಲ್ವಾರಿ ಶರೀಫ್ಗೆ ಸಂಬಂಧಿಸಿದ ಪ್ರಕರಣದಲ್ಲಿ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿತ್ತು. ನಂತರ ಈ ಪ್ರಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದು ಬೆಳಕಿಗೆ ಬಂದಿತ್ತು. ದೇಶದಲ್ಲಿ ಕೋಮು ಗಲಭೆ ಸೃಷ್ಟಿಸುವ ಸಂಚು ರೂಪಿಸಲಾಗಿತ್ತು ಎಂದು ಆರೋಪಿಸಲಾಗಿತ್ತು. ಪ್ರಕರಣದ ತನಿಖೆಯ ಜಾಡು ಹಿಡಿದು ಎನ್ಐಎ ಅಧಿಕಾರಿಗಳ ತಂಡವು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಾಳಿ ನಡೆಸಿತ್ತು.
ಮಾರ್ಚ್ 6ರಂದು ದಾಳಿ ನಡೆಸಿದ್ದ ಎನ್ಐಎ ದಕ್ಷಿಣ ಕನ್ನಡ ಜಿಲ್ಲೆಯ ಮೂವರು ಸೇರಿ ಕರ್ನಾಟಕದ ನಾಲ್ವರು, ಕಾಸರಗೋಡಿನ ಒಬ್ಬ ಆರೋಪಿ ಸೇರಿ ಒಟ್ಟು ಐವರನ್ನು ಪಿಎಫ್ಐಗೆ ಹವಾಲಾ ಫಂಡಿಂಗ್ ನಡೆಸುತ್ತಿದ್ದ ಆರೋಪದಲ್ಲಿ ಬಂಧಿಸಲಾಗಿತ್ತು.ಅದರ ಮುಂದುವರಿದ ಭಾಗವಾಗಿ ಈ ದಾಳಿ ನಡೆದಿದೆ ಎನ್ನಲಾಗಿದೆ.
ದಕ್ಷಿಣ ಕನ್ನಡ ಮಾತ್ರವಲ್ಲದೇ ಕೇರಳ ಮತ್ತು ಬಿಹಾರದಲ್ಲಿಯೂ ಎನ್ಐಎ ದಾಳಿ ನಡೆಸಿದೆ. ದಕ್ಷಿಣ ಕನ್ನಡದ 16 ಕಡೆ ದಾಳಿ ನಡೆಸಿರುವ ಎನ್ಐಎ, ಇದೇವೇಳೆ ಕೇರಳ, ಬಿಹಾರದಲ್ಲಿ ಒಟ್ಟು 25 ಕಡೆ ಎನ್ಐಎ ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಜೊತೆಗೆ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸುತ್ತಿದ್ದಾರೆ ಎಂದು ವರದಿಯಾಗಿದೆ.
YuvaBharataha Latest Kannada News