ಕಂದಾಯ ಇಲಾಖೆಯಲ್ಲಿ ಕಾವೇರಿ ತಂತ್ರಾಂಶ 2.0 ಜಾರಿ, ಇನ್ಮುಂದೆ 10 ನಿಮಿಷದಲ್ಲಿ ಆಸ್ತಿ ನೋಂದಣಿ : ಸಚಿವ ಆರ್ ಅಶೋಕ

ಕಾವೇರಿ ತಂತ್ರಜ್ಞಾನ 2.0 ಕ್ರಾಂತಿಕಾರಿ ಬದಲಾವಣೆಗೆ ಕಾರಣವಾಗಲಿದೆ. ಇದನ್ನು ಬೆಳಗಾವಿ ದಕ್ಷಿಣ, ಚಿಂಚೋಳಿಯಲ್ಲಿ ಪ್ರಾಯೋಗಿಕವಾಗಿ ಮಾಡಲಾಗಿದೆ.
ಯುವ ಭಾರತ ಸುದ್ದಿ ಬೆಂಗಳೂರು:
ಕಂದಾಯ ಇಲಾಖೆಯಲ್ಲಿ ಕಾವೇರಿ ತಂತ್ರಾಂಶ 2.0 ಜಾರಿಗೆ ತಂದಿದ್ದು, ಹತ್ತು ನಿಮಿಷಗಳಲ್ಲಿ ಆಸ್ತಿ ನೋಂದಣಿ ಕಾರ್ಯ ಮುಗಿಯಲಿದೆ ಎಂದು ಕಂದಾಯ ಸಚಿವ ಆರ್.ಅಶೋಕ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಕಾವೇರಿ 2.0 ತಂತ್ರಾಂಶದ ಕುರಿತು ಮಾತನಾಡಿದ ಅವರು, ಈ ತಂತ್ರಾಂಶ ನಾಗರೀಕ ಸ್ನೇಹಿಯಾಗಿದೆ. ಇದರಿಂದ ಮಧ್ಯವರ್ತಿಗಳ ಹಾವಳಿಗೆ ಬ್ರೇಕ್ ಬೀಳಲಿದೆ. ವರ್ಷದೊಳಗೆ ಅರ್ಜಿ ಹಾಕುವುದನ್ನು ತಪ್ಪಿಸಿ, ಆನ್ ಲೈನ್ನಲ್ಲಿ ಎಲ್ಲವೂ ಸಿಗುವಂತೆ ಮಾಡಲಾಗುವುದು. ಮೂರು ತಿಂಗಳಲ್ಲಿ ಎಲ್ಲ ಜಿಲ್ಲೆಗಳಲ್ಲಿ ಪ್ರಾರಂಭವಾಗಲಿದೆ. ಆಸ್ತಿ, ವಿವಾಹ ನೋಂದಣಿ ಸೇರಿದಂತೆ ಕಂದಾಯ ಇಲಾಖೆಯ ಎಲ್ಲ ರೀತಿಯ ನೋಂದಣಿಗಳು ಇನ್ನು ಮುಂದೆ ಆನ್ ಲೈನ್ನಲ್ಲಿ ಆಗುತ್ತವೆ ಎಂದು ತಿಳಿಸಿದರು.
ನೋಂದಣಿ ಮಾಡುವ ಮೊದಲು,ಮನೆಯಲ್ಲೇ ಕುಳಿತು ಡೀಡ್ ಅನ್ನು ಉಪನೋಂದಣಾಕಾರಿ ಕಚೇರಿಗೆ ಕಳುಹಿಸಿದರೆ ಅದರಲ್ಲಿ ತಪ್ಪಿದ್ದರೆ ಉಪನೋಂದಣಾಧಿಕಾರಿಯವರು ತಿದ್ದಿ ಕಳುಹಿಸುತ್ತಾರೆ. ಎಲ್ಲವೂ ಸರಿಯಾಗಿದ್ದರೆ ನಿಗದಿತ ಹಣ ಕಟ್ಟಲು ಸೂಚಿಸುತ್ತಾರೆ. ಎಲ್ಲವೂ ಸರಿಯಾದ ಬಳಿಕ ಸ್ಲಾಟ್ ಬುಕ್ ಮಾಡಲಾಗುತ್ತದೆ. ಆ ಸಮಯದಲ್ಲಿ ಹೋಗಿ, ಮುಖ, ಸಹಿ, ಹೆಬ್ಬೆಟ್ಟು ಹಾಕಿ ನೋಂದಣಿ ಮಾಡಿಸಿಕೊಳ್ಳಬಹುದು. ಇದರಿಂದ ಡೇಟಾ ಎಂಟ್ರಿ ಕಡಿಮೆ ಆಗಲಿದೆ. ಆನ್ಲೈನ್ನಲ್ಲೇ ಪ್ರಮಾಣಪತ್ರ ಪಡೆಯಬಹುದು ಎಂದು ವಿವರಿಸಿದರು.
ಕಾವೇರಿ ತಂತ್ರಜ್ಞಾನ 2.0 ಕ್ರಾಂತಿಕಾರಿ ಬದಲಾವಣೆಗೆ ಕಾರಣವಾಗಲಿದೆ. ಇದನ್ನು ಬೆಳಗಾವಿ ದಕ್ಷಿಣ, ಚಿಂಚೋಳಿಯಲ್ಲಿ ಪ್ರಾಯೋಗಿಕವಾಗಿ ಮಾಡಲಾಗಿದೆ. ಹಣ ಬ್ಯಾಂಕ್ ಖಾತೆಯಿಂದ ನೇರವಾಗಿ ಇಲಾಖೆ ಖಾತೆಗೆ ವರ್ಗಾವಣೆ ಆಗಲಿದೆ. ಉಪನೋಂದಣಾಕಾರಿ ಕಚೇರಿಯಲ್ಲಿ ಜನರ ಗುಂಪು ಕೂಡ ಇರುವುದಿಲ್ಲ. ಅವರ ಸ್ಲಾಟ್ಬಂದಾಗ ಅವರಿಗೆ ನೀಡಿದ ಸಮಯದಲ್ಲಿ ಅವರು ಕಚೇರಿಗೆ ಬಂದು ಹೋಗಬಹುದು. ಇನ್ಮುಂದೆ ಉಪನೋಂದಣಾಧಿಕಾರಿ ಕಚೇರಿ ಪಾಸ್ ಪೋರ್ಟ್ ಕಚೇರಿ ರೀತಿ ಕಾರ್ಯ ನಿರ್ವಹಿಸಲಿದೆ. ಲಿಫ್ಟ್, ವಿಕಲಚೇತನರ ರ್ಯಾಂಪ್ ಎಲ್ಲವೂ ಇರಲಿದ್ದು, ಎಲ್ಲ ನೋಂದಣಿ ಕಚೇರಿಗಳಲ್ಲಿಯೂ ಇದನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು.
ಮೊದಲು ಸಬ್ ರಿಜಿಸ್ಟ್ರ್ರಾ ಕಚೇರಿಗೆ ಹೋಗಲು ಪಹಣಿ, ನಕಲಿನ ದಾಖಲೆ ನೀಡಿ ನೋಂದಣಿ ಮಾಡಿಸಲಾಗುತ್ತಿತ್ತು. ಈಗ ಸಬ್ ರಿಜಿಸ್ಟ್ರ್ರಾ ಕಚೇರಿಯಲ್ಲೇ ಎಲ್ಲಾ ದಾಖಲೆಗಳು ಲಭ್ಯ ಇರಲಿದೆ. ಖಾತೆ, ಪಹಣಿ, ಸರ್ವೆ ನಂಬರ್ ಎಲ್ಲಾ ದಾಖಲೆ ಸಬ್ ರಿಜಿಸ್ಟ್ರೇಷನ್ ಕಚೇರಿಯಲ್ಲೇ ದೊರೆಯಲಿದೆ. ನೋಂದಣಿ ಆದ ಬಳಿಕ ದಾಖಲೆಗಳು ಮಾಲೀಕರ ಡಿಜಿ ಲಾಕರಿಗೆ ಹೋಗಲಿದೆ. ನಂತರ ಮನೆಯಲ್ಲೇ ಕುಳಿತು ದಾಖಲೆ ಪಡೆಯಬಹುದು ಎಂದರು.
YuvaBharataha Latest Kannada News