ಕೇಂದ್ರೀಯ ಸಂಸ್ಥೆಗಳ ದುರುಪಯೋಗದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

ಯುವ ಭಾರತ ಸುದ್ದಿ ನವದೆಹಲಿ:
ಕೇಂದ್ರೀಯ ತನಿಖಾ ಸಂಸ್ಥೆಗಳ ದುರ್ಬಳಕೆ ಕುರಿತು 14 ಪ್ರತಿಪಕ್ಷಗಳು ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಬುಧವಾರ ವಜಾಗೊಳಿಸಿದೆ.
ನಿರ್ದಿಷ್ಟ ಪ್ರಕರಣವನ್ನು ಉಲ್ಲೇಖಿಸಲು ವಿರೋಧ ಪಕ್ಷಗಳಿಗೆ ಸುಪ್ರೀಂ ಕೋರ್ಟ್ ಸೂಚಿಸಿದೆ.
ಕೇಂದ್ರ ಸರ್ಕಾರವು ವಿರೋಧ ಪಕ್ಷದ ನಾಯಕರ ವಿರುದ್ಧ ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ಅನಿಯಂತ್ರಿತವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದೆ ಮತ್ತು ಈ ಬಗ್ಗೆ ಮಾರ್ಗಸೂಚಿಗಳನ್ನು ಸೂಚಿಸಬೇಕು ಎಂದು ಕೋರಿ ಕಾಂಗ್ರೆಸ್ ನೇತೃತ್ವದ 14 ಪಕ್ಷಗಳು ಸಲ್ಲಿಸಿದ ಮನವಿಯನ್ನು ಪರಿಗಣಿಸಲು ಸುಪ್ರೀಂ ಕೋರ್ಟ್ ಬುಧವಾರ ನಿರಾಕರಿಸಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ ನೇತೃತ್ವದ ನ್ಯಾಯಮೂರ್ತಿಗಳಾದ ಪಿ.ಎಸ್.ನರಸಿಂಹ ಮತ್ತು ಜೆ.ಬಿ.ಪರ್ದಿವಾಲಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ರಾಜಕೀಯ ನಾಯಕರಿಗೆ ಉನ್ನತ ವೇದಿಕೆ ನೀಡಲು ಸಾಧ್ಯವಿಲ್ಲ ಮತ್ತು ವಿನಾಯಿತಿ ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ.
ರಾಜಕೀಯ ನಾಯಕರು ಭಾರತದ ಪ್ರಜೆಗಳು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ನೀವು ಪ್ರಜಾಪ್ರಭುತ್ವದ ಬಗ್ಗೆ ಹೇಳುವ ಕ್ಷಣ, ಇದು ಮೂಲಭೂತವಾಗಿ ರಾಜಕಾರಣಿಗಳ ಪರವಾಗಿ ಮಾಡುವ ಮನವಿಯಾಗಿದೆ ಎಂದು ಸಿಜೆಐ ಚಂದ್ರಚೂಡ ಹೇಳಿದರು ಮತ್ತು ರಾಜಕಾರಣಿಗಳಿಗೆ ವಿಭಿನ್ನ ಕಾರ್ಯವಿಧಾನಗಳು ಹೇಗೆ ಇರುತ್ತವೆ ಎಂದು ಪ್ರಶ್ನಿಸಿದರು.
ವಿರೋಧ ಪಕ್ಷದ ರಾಜಕೀಯ ನಾಯಕರು ಮತ್ತು ಭಿನ್ನಾಭಿಪ್ರಾಯದ ಮೂಲಭೂತ ಹಕ್ಕನ್ನು ಚಲಾಯಿಸುವ ಇತರ ನಾಗರಿಕರ ವಿರುದ್ಧ ಬಲವಂತದ ಕ್ರಿಮಿನಲ್ ಪ್ರಕ್ರಿಯೆಗಳ ಬಳಕೆಯಲ್ಲಿ ಆತಂಕಕಾರಿ ಮಟ್ಟದಲ್ಲಿ ಏರಿಕೆ ಕಂಡುಬಂದಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿತ್ತು.
ರಾಜಕೀಯ ಭಿನ್ನಾಭಿಪ್ರಾಯವನ್ನು ಸಂಪೂರ್ಣವಾಗಿ ಹತ್ತಿಕ್ಕುವ ಉದ್ದೇಶದಿಂದ ಸಿಬಿಐ ಮತ್ತು ಇಡಿಯಂತಹ ತನಿಖಾ ಸಂಸ್ಥೆಗಳನ್ನು ಆಯ್ದ ಮತ್ತು ಟಾರ್ಗೆಟ್ ರೀತಿಯಲ್ಲಿ ನಿಯೋಜಿಸಲಾಗುತ್ತಿದೆ” ಎಂದು ಅರ್ಜಿದಾರರ ಪರವಾಗಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಆರೋಪಿಸಲಾಗಿದೆ.
ಅರ್ಜಿ ಸಲ್ಲಿಸಿದವರಲ್ಲಿ ಕಾಂಗ್ರೆಸ್ ಹೊರತಾಗಿ, ಡಿಎಂಕೆ, ಆರ್ಜೆಡಿ, ಬಿಆರ್ಎಸ್, ತೃಣಮೂಲ ಕಾಂಗ್ರೆಸ್, ಎಎಪಿ, ಎನ್ಸಿಪಿ, ಶಿವಸೇನೆ (ಯುಬಿಟಿ), ಜೆಎಂಎಂ, ಜೆಡಿ(ಯು), ಸಿಪಿಐ(ಎಂ), ಸಿಪಿಐ, ಸಮಾಜವಾದಿ ಪಕ್ಷ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ಸೇರಿ ಎಂದು ಹೇಳಿಕೆ ತಿಳಿಸಿದೆ.
YuvaBharataha Latest Kannada News