ವಿಧಾನಸಭಾ ಚುನಾವಣೆ: ಕಾರ್ಕಳದಿಂದ ಸ್ಪರ್ಧಿಸುವುದಾಗಿ ಘೋಷಣೆ ಮಾಡಿದ ಪ್ರಮೋದ ಮುತಾಲಿಕ್ !

ಯುವ ಭಾರತ ಸುದ್ದಿ ಕಾರ್ಕಳ:
ವಿಧಾನಸಭೆ ಚುನಾವಣೆಯಲ್ಲಿ ಕಾರ್ಕಳ ಮತಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದಾಗಿ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಘೋಷಣೆ ಮಾಡಿದ್ದಾರೆ.
ಕಾರ್ಕಳದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಯಾರು ಏನೇ ಒತ್ತಡ ಹಾಕಿದರೂ ನಾನು ಕಾರ್ಕಳ ಕ್ಷೇತ್ರದಲ್ಲೇ ಸ್ಪರ್ಧೆ ಮಾಡುವುದು ನಿಶ್ಚಿತ. ಸಾವಿರಾರು ಕಾರ್ಯಕರ್ತರ ನೋವಿನ ಧ್ವನಿಯಾಗಿ, ಅವರ ಒತ್ತಡದಿಂದ ನಾನು ಸ್ಪರ್ಧೆ ಮಾಡುತ್ತೇನೆ ಎಂದು ಹೇಳಿದರು.
ನನಗೆ ಬಿಜೆಪಿ ಹಾಗೂ ಅದರ ಸಿದ್ಧಾಂತದ ಬಗ್ಗೆ ವಿರೋಧ ಇಲ್ಲ. ಪ್ರಧಾನಿ ಮೋದಿ ಹಾಗೂ ಯೋಗಿಯ ಮೇಲೆ ನನಗೆ ಅಪಾರ ನಂಬಿಕೆಯಿದೆ ಆದರೆ ಬಿಜೆಪಿಯ ರಾಜ್ಯ ನಾಯಕರ ವಿರುದ್ಧ ನನ್ನ ಅಸಮಾಧಾನವಿದೆ. ನನ್ನ ಸ್ಪರ್ಧೆ ಇರುವುದು ಭ್ರಷ್ಟರ ವಿರುದ್ದ ಹಾಗೂ ಹಿಂದು ವಿರೋಧಿಗಳ ವಿರುದ್ಧ ಎಂದು ಸ್ಪಷ್ಟಪಡಿಸಿದರು.
ಉಡುಪಿ ಜಿಲ್ಲೆಯಲ್ಲಿ ಗೋ ಹತ್ಯೆಯಾಗುವ ನಂಬರ್ ಒಂದು ಪ್ರದೇಶವೆಂದರೆ ಅದು ಕಾರ್ಕಳ ಎಂದು ಹೇಳುತ್ತಿದ್ದಾರೆ. ಇವರಿಗೆ ಗೋ ಮಾತೆಯ ರಕ್ಷಣೆಗಾಗಿ ಅಧಿಕಾರ ಕೊಟ್ಟರೆ ಗೋಮಮಾತೆ ರಕ್ಷಣೆ ಆಗುತ್ತಿಲ್ಲ. ಇಲ್ಲಿನ ಹಿಂದೂ ಕಾರ್ಯಕರ್ತರ ಮೇಲೆ ಗೂಂಡಾ ರೌಡಿ ಶೀಟರ್ ಕೇಸುಗಳು ದಾಖಲಾಗಿವೆ. ಹಿಂದೂ ಕಾರ್ಯಕರ್ತರು ಅಪಾಯದಲ್ಲಿದ್ದಾರೆ ಎಂದರು.
ಪ್ರಮೋದ್ ಮುತಾಲಿಕ್ ಅವರ ಈ ಘೋಷಣೆಯಿಂದ ಕಾರ್ಕಳ ವಿಧಾನಸಭೆ ಚುನಾವಣಾ ಕಣ ರಂಗೇರಿದೆ. ಜತೆಗೆ ಎಲ್ಲರ ಗಮನ ಸೆಳೆಯಲಿದೆ.
YuvaBharataha Latest Kannada News