Breaking News

ಗದಗ ವಿವಿ ಘಟಿಕೋತ್ಸವ : ಬೆಳಗಾವಿ ಪರಿಸರವಾದಿ ಶಿವಾಜಿ ಕಾಗಣಿಕರಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ

Spread the love

ಗದಗ ವಿವಿ ಘಟಿಕೋತ್ಸವ : ಬೆಳಗಾವಿ ಪರಿಸರವಾದಿ ಶಿವಾಜಿ ಕಾಗಣಿಕರಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ

ಗದಗ ತಾಲೂಕಿನ ನಾಗಾವಿಯಲ್ಲಿನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಕೌಶಲ್ಯ ಭವನದಲ್ಲಿ ಬುಧವಾರ ಆಯೋಜಿಸಲಾಗಿದ್ದ ವಿಶ್ವವಿದ್ಯಾಲಯದ ಮೂರನೇ ಘಟಿಕೋತ್ಸವ ಸಮಾರಂಭದಲ್ಲಿ ಕರ್ನಾಟಕ ರಾಜ್ಯಪಾಲ ಥಾವರ ಚಂದ್ ಗೆಹ್ಲೋಟ್ ಅವರು ಬೆಳಗಾವಿಯ  ಕಟ್ಟಣಬಾವಿ ಗ್ರಾಮದ ಗಾಂಧಿವಾದಿ ಮತ್ತು ಹಿರಿಯ  ಸಾಮಾಜಿಕ ಕಾರ್ಯಕರ್ತ ಶಿವಾಜಿ ಕಾಗಣಿಕರ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದರು.

 

ಯುವ ಭಾರತ ಸುದ್ದಿ ಗದಗ :
ಕೃಷಿ ದೇಶದ ಆರ್ಥಿಕತೆಯ ಬೆನ್ನೆಲುಬಾಗಿದ್ದು ಇಂದಿನ ಕೃಷಿ ಕ್ಷೇತ್ರದಲ್ಲಿ ಬದಲಾವಣೆಯಾಗಬೇಕಾಗಿದ್ದು ಕೃಷಿ ರಂಗದಲ್ಲಿಯೂ ತಾಂತ್ರಿಕತೆಯನ್ನು ಅಳವಡಿಸಿಕೊಳ್ಳುವದರ ಜೊತೆಗೆ ಜೈವಿಕ ಕೃಷಿ ಪದ್ಧತಿಗೆ ಒತ್ತು ನೀಡಬೇಕು ಎಂದು ರಾಜ್ಯಪಾಲ ಥಾವರ ಚಂದ್ ಗೆಹ್ಲೊಟ್ ನುಡಿದರು.

ನಾಗಾವಿಯ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ವಿಶ್ವವಿದ್ಯಾಲಯದ ಮೂರನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪದವಿ ಹಾಗೂ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಪ್ರದಾನ ಮಾಡಿ ಅವರು ಮಾತನಾಡಿದರು.

ಈ ವಿಶ್ವವಿದ್ಯಾಲಯದಲ್ಲಿ ಗ್ರಾಮೀಣಾಭಿವೃದ್ಧಿಗೆ ಸಂಬಂಧಿಸಿದಂತೆ ಶಿಕ್ಷಣ ನೀಡಲಾಗುತ್ತಿದ್ದು ಇಲ್ಲಿ ನೀಡಲಾಗುತ್ತಿರುವ ಶಿಕ್ಷಣವನ್ನು ದೇಶದ ಬೇರಾವ ವಿಶ್ವವಿದ್ಯಾಲಯದಲ್ಲಿ ನೀಡಲಾಗುತ್ತಿಲ್ಲ ಎಂದರು. ವಿದ್ಯಾರ್ಥಿಗಳು ವಿಶ್ವವಿದ್ಯಾಲಯದಲ್ಲಿ ಕೃಷಿ ಹಾಗೂ ಗ್ರಾಮಗಳ ಅಭಿವೃದ್ಧಿಗಾಗಿ ನೀಡುವಂತಹ ಶಿಕ್ಷಣದೊಂದಿಗೆ ಗಾಂಧೀಜಿ ಅವರು ಕಂಡಂತಹ ಗ್ರಾಮ ಸ್ವರಾಜ್ ಕನಸನ್ನು ನನಸಾಗಿಸಲು ಮುಂದಾಗುವಂತೆ ತಿಳಿಸಿದರು.

ವಿದ್ಯಾರ್ಥಿಗಳು ಈ ವಿಶ್ವವಿದ್ಯಾಲಯದಿಂದ ಪಡೆದಂತಹ ಶಿಕ್ಷಣದಿಂದ ಜೀವನದಲ್ಲಿ ಮುನ್ನಡೆಯುವದರೊಂದಿಗೆ ಕೃಷಿ ಹಾಗೂ ಗ್ರಾಮೀಣ ಅಭಿವೃದ್ಧಿಗಾಗಿ ಸಂಕಲ್ಪ ತೊಡುವಂತೆ ತಿಳಿಸಿದರು. ಇಂದು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕೃಷಿ ಕ್ಷೇತ್ರಗಳ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಜಾರಿ ಮಾಡಿದ್ದು ಗ್ರಾಮೀಣ ಭಾಗದಲ್ಲಿ ಇವುಗಳ ಸದುಪಯೋಗಯಾಗುವಂತೆ ಪ್ರೇರೆಪಿಸಲು ಕರೆ ನೀಡಿದರು. ನವಭಾರತ ನಿರ್ಮಾಣದಲ್ಲಿ ಹೊಸ ಶಿಕ್ಷಣ ನೀತಿ ಮಹತ್ತರ ಪಾತ್ರ ವಹಿಸುವುದು ಅಲ್ಲದೇ ಮಾತೃ ಭಾಷೆಗೆ ಪ್ರೋತ್ಸಾಹ ನೀಡುವದರ ಮೂಲಕ ವಿಕಾಸ ಹೊಂದಿದ ದೇಶಗಳ ಸಾಲಿನಲ್ಲಿ ಭಾರತವು ಬರುವಂತೆ ಆಗಬೇಕು.

ಮನುಷ್ಯನ ಜೀವನ ಪ್ರಕೃತಿ ಮೇಲೆ ಅವಲಂಭಿತವಾಗಿದೆ. ಪರಿಸರ ಸಂರಕ್ಷಣೆ ಹಾಗೂ ಸಂವರ್ಧನೆಗೆ ಹೆಚ್ಚಿನ ಒತ್ತು ನೀಡುವದರ ಮೂಲಕ ಭಾರತವನ್ನು ಸ್ವಸ್ಥ್ಯ ಭಾರತವನ್ನಾಗಿಸಬೇಕು. ವಿಧ್ಯಾರ್ಥಿಗಳು ಸಾರ್ವಜನಿಕ ಜೀವನದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸಮಾಜ ಸುಧಾರಣೆಗೆ ಮುಂದಾಗಿ ತಮ್ಮ ಚಿಂತನೆಗಳೊಂದಿಗೆ ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಮುಂದಾಗುವಂತೆ ರಾಜ್ಯಪಾಲ ಥಾವರ ಚಂದ್ ಗೆಹ್ಲೋಟ ಕರೆ ನೀಡಿದರು.

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಅಧ್ಯಕ್ಷ ಹಾಗೂ ಇಂಫಾಲ್ ಕೇಂದ್ರಿಯ ಕೃಷಿ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ.ಸುಬ್ಬಣ್ಣಅಯ್ಯಪನ್ ಅವರು ಘಟಿಕೋತ್ಸವದ ಭಾಷಣ ಮಾಡುತ್ತಾ ಮಾತನಾಡಿ, ರೈತ ಸಮುದಾಯ, ಅನ್ನದಾತರು ತಮ್ಮ ಸಮರ್ಪಣೆ ಮತ್ತು ಕಠಿಣ ಪರಿಶ್ರಮದ ಮೂಲಕ ದೇಶದ 140 ಕೋಟಿ ಜನರ ಆಹಾರ ಭದ್ರತೆಯನ್ನು ಖಚಿತಪಡಿಸುವುದರ ಜೊತೆಗೆ ಸಧೃಢ ಹಾಗೂ ಶಕ್ತಿಯುತ ರಾಷ್ಟ್ರವನ್ನು ರೂಪಿಸುತ್ತಿದ್ದಾರೆ ಎಂದರು.

ಇಂದು ಮೌಲ್ಯ ವರ್ಧಿತ ಉತ್ಪನ್ನಗಳ ತಯಾರಿಕೆ, ಕೃಷಿ ಪದ್ಧತಿಗಳ ವೈವಿದ್ಯಕರಣದ ಜೊತೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತಿದೆ. ಕೃಷಿಯ ಬಗೆಗಿನ ಋಣಾತ್ಮಕ ಮಿಥ್ಯೆಗಳನ್ನು ನಿರ್ಲಕ್ಷಿಸಬೇಕಾಗಿದ್ದು ಔಪಚಾರಿಕ ಮತ್ತು ಅನೌಪಚಾರಿಕ ಶಿಕ್ಷಣದ ಮೂಲಕ ತರಬೇತಿ ಪಡೆದ ಸಿಬ್ಬಂದಿಗಳ ಉದ್ಯೋಗವಕಾಶವನ್ನು ಹೆಚ್ಚಿಸಲು ಗಮನ ಹರಿಸಬೇಕಾಗಿದೆ. ಯುವ ರೈತರಿಗೆ ತಂತ್ರಜ್ಞಾನ, ಕೃಷಿಯಲ್ಲಿ ಸಂಯೋಜಿತ ಮತ್ತು ಬಹುಕ್ರಿಯಾತ್ಮಕ ವ್ಯಾಪಾರ ವಿಧಾನಗಳ ಕುರಿತು ಮನವರಿಕೆ ಮಾಡಬೇಕಾಗಿದೆ ಎಂದರು.

ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ವಿಶ್ವವಿದ್ಯಾಲಯವು ರಾಜ್ಯದಲ್ಲಿ ಮಾತ್ರವಲ್ಲದೇ ಇಡೀ ದೇಶದಲ್ಲಿ ಒಂದು ವಿಶಿಷ್ಟ ಶಿಕ್ಷಣ ಸಂಸ್ಥೆಯಾಗಿದೆ. ಭಾರತ ಹಳ್ಳಿಗಳ ನಾಡಾಗಿದ್ದು ದೇಶದ 60% ಕ್ಕಿಂತ ಹೆಚ್ಚು ಜನರು ಗ್ರಾಮೀಣ ವಾಸಿಗಳಾಗಿದ್ದು ಸಮಾಜದ ಜೀವನಾಡಿಯಾಗಿದ್ದಾರೆ. ಈ ವಿಶ್ವವಿದ್ಯಾಲಯದಲ್ಲಿ ವಿಜ್ಞಾನ, ತಂತ್ರಜ್ಞಾನ ಮತ್ತು ಅವಿಷ್ಕಾರಗಳ ಮೂಲಕ ಗ್ರಾಮೀಣ ಜನರ ಸಮಸ್ಯೆಗಳನ್ನು ಪರಿಸಹರಿಸುವ ವಿಧಾನಗಳು ಮತ್ತು ಪರಿಹಾರಗಳನ್ನು ಒದಗಿಸುವ ನಿಟ್ಟಿನಲ್ಲಿ ಯುವಜನರ ಜ್ಞಾನ ಮತ್ತು ಕೌಶಲ್ಯ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡುತ್ತಿದೆ. ಈ ವಿಶ್ವವಿದ್ಯಾಲಯದಿಂದ ಪಡೆದಂತಹ ತಾಂತ್ರಿಕ ಜ್ಞಾನದೊಂದಿಗೆ ಯಶಸ್ವಿ ಉದ್ಯಮಿ, ಉದ್ಯೋಗಾಂಕ್ಷಿ ಬದಲಿಗೆ ಉದ್ಯೋಗ ಒದಗಿಸುವವರಾಗುವಂತೆ ಕರೆ ನೀಡಿದರು.

ಉತ್ತಮ ಶಿಕ್ಷಣ ಮತ್ತು ಜ್ಞಾನ, ಕೌಶಲ್ಯಗಳು, ನಾವಿನ್ಯತೆ ಮತ್ತು ಸೇವಾ ಮನೋಭಾವದೊಂದಿಗೆ ಉತ್ತಮ ಸಾಧನೆ ಮಾಡಲು ಮುಂದಾಗಬೇಕು.

ಜೀವನಪರ್ಯಂತ ಜ್ಞಾನದ ಅನ್ವೇಷಣೆಯಲ್ಲಿ ಪ್ರಾಮಾಣಿಕವಾಗಿ ಹಾಗೂ ಕಟ್ಟುನಿಟ್ಟಾಗಿ ಸಮರ್ಪಣಾ ಭಾವದಿಂದ ಮಾನವೀಯ ಸೇವೆಯನ್ನು ಮಾಡಬೇಕು. ಸಾಂಪ್ರದಾಯಿಕ ಬುದ್ದಿವಂತಿಕೆಯೊಂದಿಗೆ ಆಧುನಿಕ ಜ್ಞಾನವನ್ನು ಸೇರಿಸುವ ಮೂಲಕ ಈ ವಿಶ್ವವಿದ್ಯಾಲಯಕ್ಕೆ ಕೀರ್ತಿ ತರುವಂತಹ ಕಾರ್ಯ ಮಾಡಲು ಮುಂದಾಗುವಂತೆ ವಿದ್ಯಾರ್ಥಿಗಳಿಗೆ ಡಾ.ಸುಬ್ಬಣ್ಣ ಅಯ್ಯಪನ್ ಕರೆ ನೀಡಿದರು.

ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ವಿಷ್ಣುಕಾಂತ.ಎಸ್.ಚಟಪಲ್ಲಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಲಸಚಿವ ಪ್ರೊ. ಬಸವರಾಜ ಲಕ್ಕಣ್ಣವರ, ವಿಶ್ವವಿದ್ಯಾಲಯದ ಪರಿಷತ್ ಹಾಗೂ ಶೈಕ್ಷಣಿಕ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಸುಶೀಲಾ ಬಿ, ಅಪರ ಜಿಲ್ಲಾಧಿಕಾರಿ ಎಂ.ಪಿ.ಮಾರುತಿ, ಸೇರಿದಂತೆ ಗಣ್ಯರು, ವಿದ್ಯಾರ್ಥಿಗಳು, ವಿಶ್ವ ವಿದ್ಯಾಲಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹಾಜರಿದ್ದರು.

ಕಾರ್ಯಕ್ರಮಕ್ಕೂ ಮುನ್ನ ರಾಜ್ಯಪಾಲ ಥಾವರ ಚಂದ್ ಗೆಹ್ಲೊಟ್ ಅವರು ವಿಶ್ವ ವಿದ್ಯಾಲಯದ ಆವರಣದಲ್ಲಿರುವ ಸಬರಮತಿ ಪ್ರತಿಕೃತಿ ಆಶ್ರಮಕ್ಕೆ ಭೇಟಿ ನೀಡಿ ವೀಕ್ಷಿಸಿದರು.

 

ಚಿನ್ನದ ಪದಕ ಪ್ರದಾನ: ಗದಗ ತಾಲೂಕಿನ ನಾಗಾವಿಯಲ್ಲಿನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಕೌಶಲ್ಯ ಭವನದಲ್ಲಿ ಬುಧವಾರ  ಆಯೋಜಿಸಲಾಗಿದ್ದ ವಿಶ್ವವಿದ್ಯಾಲಯದ ಮೂರನೇ ಘಟಿಕೋತ್ಸವ ಸಮಾರಂಭದಲ್ಲಿ ಕರ್ನಾಟಕ ರಾಜ್ಯಪಾಲ ಥಾವರ ಚಂದ್ ಗೆಹ್ಲೋಟ ಅವರು ವಿವಿಧ ಸ್ನಾತಕೋತ್ತರ ವಿಭಾಗಗಳಲ್ಲಿ ಉತ್ತಮ ಅಂಕ ಗಳಿಸಿದ ಪ್ರೀತಂ.ಸಿ.ಜಿ., ದಿವ್ಯ ಬಿ.ಯು., ಚಿದಾನಂದ ಆಶ್ಯಾಳ, ವೀಣಾ ಭಜಂತ್ರಿ, ಕೆ.ಆರ್.ಮೋಹನ, ಎಸ್. ತೇಜಸ, ಪ್ರಿಯಾ ನೀರಲಕಟ್ಟಿ, ಶೋಭಾ ಪೂಜೆರ, ಪೂಜಾ ಕಣವಿ, ಅಫ್ರಿನಸನಾ ಹಂಪಾಪಟ್ಟಣ ಅವರುಗಳಿಗೆ ಚಿನ್ನದ ಪದಕ ನೀಡಿ ಗೌರವಿಸಲಾಯಿತು.


Spread the love

About Yuva Bharatha

Check Also

ಹಿರೇಬೂದನೂರ : ಭಕ್ತರ ಸನ್ಮಾನ

Spread the loveಹಿರೇಬೂದನೂರ : ಭಕ್ತರ ಸನ್ಮಾನ ಮುರಗೋಡ : ಹಿರೇಬೂದನೂರ ಗ್ರಾಮದ ಶ್ರೀ ಸದ್ಗುರು ಸಂತ ಬಾಳುಮಾಮಾ ದೇವಸ್ಥಾನದ …

Leave a Reply

Your email address will not be published. Required fields are marked *

three × 4 =