ಹಿರೇ ಬಾಗೇವಾಡಿ : ಎಸ್ಎಸ್ಎಲ್ಸಿ ಪರೀಕ್ಷಾ ಕೇಂದ್ರದಲ್ಲಿ ಕರ್ತವ್ಯ ಲೋಪ ; 7 ಶಿಕ್ಷಕರು ಅಮಾನತು
ಯುವ ಭಾರತ ಸುದ್ದಿ ಬೆಳಗಾವಿ :
ಹಿರೇಬಾಗೇವಾಡಿ ಎಸ್ ಎಸ್ ಎಲ್ ಸಿ ಪರೀಕ್ಷಾ ಕೇಂದ್ರದಲ್ಲಿ ಕರ್ತವ್ಯ ಲೋಪ ಎಸಗಿದ ಏಳು ಶಿಕ್ಷಕರನ್ನು ಅಮಾನತು ಮಾಡಿ ಬೆಳಗಾವಿ ಡಿಡಿಪಿಐ ಬಸವರಾಜ ನಾಲತವಾಡ ಗುರುವಾರ ಆದೇಶ ಹೊರಡಿಸಿದ್ದಾರೆ.
ಶಿಕ್ಷಕರಾದ ಎಸ್.ಎಸ್. ಕರವಿನಕೊಪ್ಪ, ಎಂ.ಎಸ್. ಅಕ್ಕಿ, ಎ.ಎಚ್. ಪಾಟೀಲ, ವಿ.ಎಸ್. ಬೀಳಗಿ, ಎಲ್.ಆರ್. ಮಹಾಜನಶೆಟ್ಟಿ, ಇದ್ದಲಹೊಂಡ ಶಾಲೆ ಶಿಕ್ಷಕ ಎನ್.ಎಂ. ನಂದಿಹಳ್ಳಿ, ಸುಳೇಭಾವಿ ಸರ್ಕಾರಿ ಪ್ರೌಢ ಶಾಲೆ ಶಿಕ್ಷಕಿ ಎಸ್.ಸಿ. ಧೂಳಪ್ಪನವರ ಅವರನ್ನು ಅಮಾನತು ಮಾಡಲಾಗಿದೆ.
ಧಾರವಾಡ ಶಿಕ್ಷಣ ಇಲಾಖೆ ಅಪರ ಆಯುಕ್ತರು ಗಣಿತ ಪರೀಕ್ಷೆಯ ದಿನದಂದು ಪರೀಕ್ಷಾ ಕೇಂದ್ರಕ್ಕೆ ಭೇಟಿ ಕೊಟ್ಟಿದ್ದರು.
ಈ ವೇಳೆ ಕೊಠಡಿ ಮೇಲ್ವಿಚಾರಕರು ಮಕ್ಕಳನ್ನು ಸರಿಯಾಗಿ ತಪಾಸಣೆ ಮಾಡದೇ ಇರುವುದು. ಪೋಲಿಸ್ ವ್ಯವಸ್ಥೆ ಸರಿಯಾಗಿ ಮಾಡದೇ ಇರುವುದು. ನಕಲು ಚೀಟಿಗಳನ್ನು ಕೊಠಡಿಯೊಳಗೆ ಎಸೆಯುತ್ತಿರುವುದು,
ಶಾಲಾ ಕೊಠಡಿಯ ಹಿಂದುಗಡೆ ಜನ ಓಡಾಡುತ್ತಿರುವುದು ಕಂಡು ಬಂದಿತ್ತು. ಹೀಗಾಗಿ ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಅಮಾನತು ಮಾಡಲಾಗಿದೆ ಎಂದು ತಿಳಿಸಲಾಗಿದೆ.