ಗೋಕಾಕ: ಶಾಲಾ ದಿನಗಳಲ್ಲಿ ತಮಗೆ ವಿದ್ಯೆಯನ್ನು ಧಾರೆ ಎರೆದ ಶಿಕ್ಷಕರನ್ನು ನೆನಪಿನಲ್ಲಿಟ್ಟುಕೊಂಡು, ಅಂದಿನ ಶಾಲೆಯ ಎಲ್ಲ ಸಹಪಾಠಿಗಳು ಒಂದೆಡೆ ಸೇರಿ ಶಿಕ್ಷಕರಿಗೆ ಗುರುವಂದನೆಯಾಗಿ ನಮ್ಮನ್ನು ಗೌರವಿಸುತ್ತಿರುವದು ಸಂತಸ ತಂದಿದೆ ಎಂದು ಶಿಕ್ಷಕ ಬಸವರಾಜ ಚಿಪ್ಪಲಕಟ್ಟಿ ಹೇಳಿದರು.
ರವಿವಾರದಂದು ನಗರದ ಸಮೀಪದ ಬಸವೇಶ್ವರ ಸಭಾ ಭವನದಲ್ಲಿ ನ್ಯೂ ಇಂಗ್ಲೀಷ ಸ್ಕೂಲ ಗೋಕಾಕ ಇಲ್ಲಿನ ೧೯೯೪-೯೫ನೇ ಸಾಲಿನ ಎಸ್ಎಸ್ಎಲ್ಸಿ ಹಳೆಯ ವಿದ್ಯಾರ್ಥಿಗಳು ಹಮ್ಮಿಕೊಂಡ ಗುರುವಂದನಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಶಿಕ್ಷಕರು ವಿದ್ಯಾರ್ಥಿಗಳಿಗೆ ಪಾಠ, ಪ್ರವಚನ ಮಾಡುತ್ತ ಸಮಾಜದಲ್ಲಿ ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ಜವಾಬ್ದಾರಿಯನ್ನು ಹೊತ್ತುಕೊಂಡು ವಿದ್ಯಾರ್ಥಿಗಳನ್ನು ಸರಿದಾರಿಗೆ ತರುವ ಪ್ರಯತ್ನ ಮಾಡುತ್ತಾರೆ. ತಮ್ಮಿಂದ ಕಲಿತ ವಿದ್ಯಾರ್ಥಿಗಳು ಶಿಕ್ಷಣವನ್ನು ಯಶಸ್ವಿಯಾಗಿ ಪೂರೈಸಿದಾಗ ಮತ್ತು ಉನ್ನತ ಸ್ಥಾನಮಾನ ಪಡೆದಾಗ ಗುರುವಿಗೆ ನನ್ನ ವಿದ್ಯಾರ್ಥಿ ಎಂಬ ಹೆಮ್ಮೆ ಮೂಡುತ್ತದೆ ಎಂದು ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಿದ್ದು ಪಾಟೀಲ, ಮಾಧು ವಾಲಿ, ಸಂದೀಪ ಆನಿಗೋಳ, ಸಿ ವಿ ದಾದನಟ್ಟಿ, ಅನು ಸತ್ತಿಗೇರಿ, ಎಮ್ ಎಮ್ ಕುರಬೇಟ, ಬಿ ಎಮ್ ಕೊಡ್ಲಾಳ, ಈರಣ್ಣ ಹಿರೇಮಠ, ಅಶೋಕ ತುಕ್ಕಾರ, ಸತೀಶ ಹಟ್ಟಿಹೊಳಿ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಇದ್ದರು.
