ಡಿಕೆಶಿ ಆರೋಪಕ್ಕೆ ಫಲಿತಾಂಶ ದಿನವೇ ತಕ್ಕ ಉತ್ತರ: ರಮೇಶ ಜಾರಕಿಹೊಳಿ!!
ಯುವ ಭಾರತ ಸುದ್ದಿ ಬೆಳಗಾವಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರ ಆರೋಪಗಳಿಗೆ ಈಗೇನು ಪ್ರತಿಕ್ರಿಯಿಸುವುದಿಲ್ಲ. ಡಿ. 14ರಂದು ವಿಧಾನ ಪರಿಷತ್ ಚುನಾವಣಾ ಫಲಿತಾಂಶ ದಿನವೇ ಅವರಿಗೆ ತಕ್ಕ ಉತ್ತರ ನೀಡಲಾಗುವುದು ಎಂದು ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಹೇಳಿದರು.
ಭಾರತೀಯ ಜನತಾ ಪಾರ್ಟಿ ನಾಯಕರ ಭೇಟಿಗೆ ದೆಹಲಿಗೆ ತೆರಳಿರುವ ರಮೇಶ ಜಾರಕಿಹೊಳಿ ಅವರು ಫೋನ್ ಮೂಲಕ ಮಾತನಾಡಿದ್ದು, ಈಗ ಏನಿದ್ದರೂ ಉತ್ತರ ಕೊಡುವುದಿಲ್ಲ. ಫಲಿತಾಂಶ ದಿನವೇ ಪ್ರತಿಯೊಂದಕ್ಕೂ ಉತ್ತರ ನೀಡಲಿದ್ದೇನೆ. ಈಗ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದರು.
ಡಿ.ಕೆ. ಶಿವಕುಮಾರ ಅವರು ಏನೇ ಮಾತಾಡಲಿ. ಚುನಾವಣೆ ಬಂದಿದೆ. ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವುದೇ ನಮ್ಮ ಗುರಿ. ಈ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಉತ್ತಮ ವಾತಾವರಣ ಇದೆ. ಇಲ್ಲಸಲ್ಲದ ಆರೋಪಗಳಿಗೆ ಫಲಿತಾಂಶ ದಿನವೇ ಉತ್ತರ ಸಿಗಲಿದೆ ಎಂದು ಹೇಳಿದರು.
ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಈಗಾಗಲೇ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳನ್ನು ಭೇಟಿಯಾಗಿ ಅಭ್ಯರ್ಥಿ ಗೆಲುವಿಗೆ ಮತಯಾಚನೆ ಮಾಡಲಾಗಿದೆ ಜಿಲ್ಲೆಯ ಗ್ರಾಪಂ, ಪುರಸಭೆ, ಪಟ್ಟಣ ಪಂಚಾಯತ್, ನಗರಸಭೆ, ಮಹಾನಗರ ಪಾಲಿಕೆಗಳಲ್ಲಿ ಬಿಜೆಪಿಯ ಅತಿ ಹೆಚ್ಚು ಸದಸ್ಯರು ಇದ್ದು, ಹೀಗಾಗಿ ಬಿಜೆಪಿ ಗೆಲುವು ನಿಶ್ಚಳವಾಗಿದೆ ಎಂದು ತಿಳಿಸಿದರು.
YuvaBharataha Latest Kannada News