Breaking News

ಸಿಎಂ ತವರು ಜಿಲ್ಲೆಯಲ್ಲಿ ಇಂದಿನಿಂದ ಸಾಹಿತ್ಯ ಜಾತ್ರೆ ಸಂಭ್ರಮ

Spread the love

ಸಿಎಂ ತವರು ಜಿಲ್ಲೆಯಲ್ಲಿ ಇಂದಿನಿಂದ ಸಾಹಿತ್ಯ ಜಾತ್ರೆ ಸಂಭ್ರಮ

ಯುವ ಭಾರತ ಸುದ್ದಿ , ಹಾವೇರಿ :
86 ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಏಲಕ್ಕಿ ಕಂಪಿನ ಹಾವೇರಿ ಸಜ್ಜಾಗಿದೆ. ಜನವರಿ 6, 7, 8 ರಂದು ಕನ್ನಡ ನುಡಿ ಜಾತ್ರೆ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಇಡೀ ನಗರ ಮಧುವಣಗಿತ್ತಿಯಂತೆ ಶೃಂಗಾರಗೊಂಡಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತವರು ಜಿಲ್ಲೆ ಆಗಿರುವುದರಿಂದ ಈ ಬಾರಿಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ವಿಶೇಷ ಮೆರುಗು ಬಂದಿದೆ. ಮೂರು ವೇದಿಕೆಗಳು ಇರಲಿವೆ. ಒಂದು ಪ್ರಧಾನ ವೇದಿಕೆ ಇದ್ದು ಅಕ್ಕಪಕ್ಕ ಎರಡು ಸಮಾನಾಂತರ ವೇದಿಕೆ ಇರಲಿವೆ. ಪ್ರಧಾನ ವೇದಿಕೆಯಲ್ಲಿ 30,000 ಆಸನಗಳು ಇರಲಿವೆ. ಪ್ರತಿದಿನ ಸಮ್ಮೇಳನಕ್ಕೆ ಒಂದು ಲಕ್ಷ ಜನ ಭೇಟಿ ನೀಡುವ ನಿರೀಕ್ಷೆ ಇದೆ. 300 ಪುಸ್ತಕ ಮಳಿಗೆ ನಿರ್ಮಿಸಲಾಗಿದೆ. 200 ಕೌಂಟರ್ ಗಳಲ್ಲಿ ಊಟ ಇರಲಿದೆ. 2000 ಬಾಣಸಿಗರು ಅಡುಗೆ ತಯಾರಿಕೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ.

ಬೆಳಿಗ್ಗೆ 7.30ಕ್ಕೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಹಾವೇರಿ ನಗರದ ಪುರಸಿದ್ಧೇಶ್ವರ ದೇವಸ್ಥಾನದಿಂದ ಹೊರಟು, ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಬೆಳಿಗ್ಗೆ 10.30ಕ್ಕೆ ಸಮ್ಮೇಳನದ ವೇದಿಕೆ ತಲುಪಲಿದೆ. ಸಮ್ಮೇಳನಾಧ್ಯ ಕ್ಷರಿಗೆ ‘ಅರಮನೆ ದರ್ಬಾರ್‌’ ಮಾದರಿ ರಥ ಮತ್ತು ಕಸಾಪ ಜಿಲ್ಲಾ ಘಟಕದ ಅಧ್ಯಕ್ಷರುಗಳಿಗೆ 11 ಸಾರೋಟುಗಳನ್ನು ಸಿದ್ಧಪಡಿಸಿರುವುದು ಈ ಸಮ್ಮೇಳನದ ವಿಶೇಷವಾಗಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಳಿಗ್ಗೆ 10.30ಕ್ಕೆ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಡಾ.ದೊಡ್ಡರಂಗೇಗೌಡ ಅವರು ಸಮ್ಮೇಳನಾಧ್ಯಕ್ಷರ ಭಾಷಣ ಮಾಡಲಿದ್ದಾರೆ. ಡಾ.ಎಚ್‌.ಎಸ್‌. ವೆಂಕಟೇಶಮೂರ್ತಿ ನಿಕಟ ಪೂರ್ವ ಸಮ್ಮೇಳನಾಧ್ಯಕ್ಷರ ನುಡಿಗಳನ್ನಾಡಲಿದ್ದಾರೆ. ಕಸಾಪ ಅಧ್ಯಕ್ಷ ಮಹೇಶ ಜೋಶಿ ಆಶಯ ನುಡಿಗಳನ್ನಾಡಲಿದ್ದಾರೆ. ಶಾಸಕ ಬಿ.ಎಸ್‌.ಯಡಿಯೂರಪ್ಪ, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಸೇರಿದಂತೆ ಸಚಿವರು, ಶಾಸಕರು, ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ.

ಭೂರಿ ಭೋಜನ: 35 ಎಕರೆಯಲ್ಲಿ ಅಡುಗೆ ಮನೆ ಮತ್ತು ಭೋಜನಾಲಯವನ್ನು ನಿರ್ಮಿಸಿದ್ದು, 200 ಕೌಂಟರ್‌ಗಳನ್ನು ತೆರೆಯಲಾಗಿದೆ. ಶೇಂಗಾ ಹೋಳಿಗೆ, ರವೆ ಉಂಡೆ, ಮೈಸೂರು ಪಾಕ್‌, ಮೋತಿಚೂರ್‌ ಲಡ್ಡು, ಕೇಸರಿಬಾತ್‌, ಶ್ಯಾವಿಗೆ ಕೀರು, ಗೋಧಿ ಹುಗ್ಗಿ ಸೇರಿದಂತೆ ಸಿಹಿ ಖಾದ್ಯಗಳನ್ನು ಒಳಗೊಂಡ ಭೂರಿ ಭೋಜನವನ್ನು ಸಿದ್ಧಪಡಿಸಲಾಗಿದೆ. ನಿತ್ಯ 1.5 ಲಕ್ಷ ಜನರಿಗೆ ಆಹಾರ ಬಡಿಸಲು 600 ಬಾಣಸಿಗರನ್ನು ಒಳಗೊಂಡ 1200 ಅಡುಗೆ ಸಿಬ್ಬಂದಿ ಸಜ್ಜಾಗಿದ್ದಾರೆ.

10 ಸಾವಿರ ಪ್ರತಿನಿಧಿಗಳು: 10 ಸಾವಿರ ಸಮ್ಮೇಳನದ ಪ್ರತಿನಿಧಿಗಳು ನೋಂದಣಿ ಮಾಡಿಕೊಂಡಿದ್ದು, ಇವರಿಗೆ ಊಟ ಮತ್ತು ವಸತಿ ವ್ಯವಸ್ಥೆಯನ್ನು ಜಿಲ್ಲಾಡಳಿತ ಕಲ್ಪಿಸಿದೆ. 31 ಜಿಲ್ಲೆಗಳಿಗೆ ಪ್ರತ್ಯೇಕ ಕೌಂಟರ್‌ ತೆರೆಯಲಾಗಿದ್ದು, ನೋಂದಣಿಗೆ ಹಾಗೂ ಓಓಡಿ ಪತ್ರ ಪಡೆಯಲು ಅವಕಾಶ ಕಲ್ಪಿಸಲಾಗಿದೆ. 300 ಪುಸ್ತಕ ಮಳಿಗೆಗಳು ಮತ್ತು 200 ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲಾಗಿದೆ.

ಉಚಿತ ಬಸ್‌ ಸೇವೆ: ಬೆಳಿಗ್ಗೆ 5.30ರಿಂದ ರಾತ್ರಿ 10.30ರವರೆಗೆ ತಾಲ್ಲೂಕು ಕೇಂದ್ರಗಳಿಂದ ಜಿಲ್ಲಾ ಕೇಂದ್ರಕ್ಕೆ ಹಾಗೂ ಜಿಲ್ಲಾ ಕೇಂದ್ರದಿಂದ ವಿವಿಧ ತಾಲ್ಲೂಕು ಕೇಂದ್ರಗಳಿಗೆ ಬಸ್‌ಗಳು ಓಡಾಡಲಿವೆ. ಪ್ರತಿ 15 ನಿಮಿಷಕ್ಕೊಂದು ಬಸ್‌ ಸಂಚರಿಸಲಿದೆ. ಸಾಹಿತ್ಯ ಸಮ್ಮೇಳನಕ್ಕೆ ಬರುವ ಸಾರ್ವಜನಿಕರಿಗೆ ರೈಲ್ವೆ ಮತ್ತು ಬಸ್‌ ನಿಲ್ದಾಣದಿಂದ ಸಮ್ಮೇಳನದ ವೇದಿಕೆ ಸ್ಥಳಕ್ಕೆ ಸಂಚರಿಸಲು ಉಚಿತ ಬಸ್‌ ವ್ಯವಸ್ಥೆ ಕಲ್ಪಿಸಲಾಗಿದೆ.

ಕಲಾ ವೈಭವ: ಸಮ್ಮೇಳನದ ವಿವಿಧ ವೇದಿಕೆಗಳಲ್ಲಿ ಗಂಗಾವತಿ ಪ್ರಾಣೇಶ್‌ ತಂಡದಿಂದ ಹಾಸ್ಯ, ಆಳ್ವಾಸ್‌ ವಿದ್ಯಾರ್ಥಿ

ಗಳಿಂದ ಸಾಂಸ್ಕೃತಿಕ ವೈವಿಧ್ಯ, ‘ನಾವಾಡುವ ನುಡಿಯೇ ಕನ್ನಡ ನುಡಿ’ ಶೀರ್ಷಿಕೆಯಡಿ ಚಲನಚಿತ್ರ ಗೀತೆಗಳ ಗಾಯನ ಸೇರಿದಂತೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜನರ ರಂಜಿಸಲಿವೆ.

86ನೇ ನುಡಿಜಾತ್ರೆಯ ಅಂಗವಾಗಿ 86 ಸಾಧಕರಿಗೆ ಸನ್ಮಾನ ಮತ್ತು 86 ಕೃತಿಗಳ ಬಿಡುಗಡೆ ಮಾಡುತ್ತಿರುವುದು ಹಾವೇರಿ ಸಮ್ಮೇಳನದ ವಿಶೇಷವಾಗಿದೆ.


Spread the love

About Yuva Bharatha

Check Also

ಹಿರೇಬೂದನೂರ : ಭಕ್ತರ ಸನ್ಮಾನ

Spread the loveಹಿರೇಬೂದನೂರ : ಭಕ್ತರ ಸನ್ಮಾನ ಮುರಗೋಡ : ಹಿರೇಬೂದನೂರ ಗ್ರಾಮದ ಶ್ರೀ ಸದ್ಗುರು ಸಂತ ಬಾಳುಮಾಮಾ ದೇವಸ್ಥಾನದ …

Leave a Reply

Your email address will not be published. Required fields are marked *

fourteen − 4 =