Breaking News

ಕೊಲ್ಹಾರ ತಾಲೂಕಿನ ವಿವಿಧೆಡೆ ಸಿದ್ದೇಶ್ವರ ಶ್ರೀಗಳಿಗೆ ಶ್ರದ್ಧಾಂಜಲಿ

Spread the love

ಕೊಲ್ಹಾರ ತಾಲೂಕಿನ ವಿವಿಧೆಡೆ ಸಿದ್ದೇಶ್ವರ ಶ್ರೀಗಳಿಗೆ ಶ್ರದ್ಧಾಂಜಲಿ

ಅಭಿನವ ಸ್ವಾಮಿ ವಿವೇಕಾನಂದ, ನಡೆದಾಡುವ ದೇವರು, ಶತಮಾನದ ಸಂತ ಲಿಂಗೈಕ್ಯ ಪರಮಪೂಜ್ಯ ಶ್ರೀ ಸಿದ್ದೇಶ್ವರ ಶ್ರೀಗಳಿಗೆ ಕೊಲ್ಹಾರ ತಾಲೂಕಿನ ವಿವಿದಡೆ ಭಾವಪೂರ್ಣ ಶೃದ್ದಾಂಜಲಿ ಸಲ್ಲಿಸಲಾಯಿತು.

ಯುವ ಭಾರತ ಸುದ್ದಿ , ಹಣಮಾಪೂರ :
ತಾಲೂಕಿನ ಹಣಮಾಪೂರ ಗ್ರಾಮದಲ್ಲಿ ಸಿದ್ದೇಶ್ವರ ಸ್ವಾಮೀಜಿ ಭಕ್ತರು ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಸಿದ್ದೇಶ್ವರ ಶ್ರೀಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮೌನಚರಣೆ ಮಾಡಿ, ಭಾವಚಿತ್ರಕ್ಕೆ ಪುಷ್ಪಾರ್ಚನೆ ಗೈದು ಶ್ರದ್ದಾಂಜಲಿ ಸಲ್ಲಿಸಿದರು.
ಶ್ರದ್ದಾಂಜಲಿ ಸಲ್ಲಿಸಿ ಗ್ರಾಮದ ಹಿರಿಯರಾದ ಶ್ರೀಶೈಲ ನರಿಯವರ ಮಾತನಾಡಿ, ಸಿದ್ದೇಶ್ವರ ಶ್ರೀಗಳು ಪ್ರವಚನದ ಮೂಲಕ ದೇಶದ ಜನತೆಗೆ ಸರಳ ಜೀವನ ನಡೆಸುವುದನ್ನು ಕಲಿಸಿದ್ದಾರೆ. ಅವರು ಪ್ರವಚನ ಸಂದರ್ಭದಲ್ಲಿ ಹಲವಾರು ಕಥೆಗಳನ್ನ ಹೇಳುತ್ತಿದ್ದರು. ಅದರಲ್ಲಿ ನೀತಿ ಇರುತಿತ್ತು. ಇದರಿಂದ ಜನರಿಗೆ ತಾವು ತಮ್ಮ ಜೀವನದಲ್ಲಿ ಮಾಡಿದ ತಪ್ಪಿನ ಅರಿವಾಗಿ ತಿದ್ದಿಕೊಳ್ಳುತ್ತಿದ್ದರು. ಜೀವನ ಅನ್ನುವುದು ಏನು ಎಂಬುದನ್ನು ನಮಗೆ ತೋರಿಸಿಕೊಟ್ಟು ಇಂದು ಕಣ್ಮರೆಯಾಗಿದ್ದಾರೆ. ಅವರು ಹೇಳಿದಂತಹ ಜೀವನದ ಸಾರವನ್ನು ತಿಳಿದಿಕೊಂಡು ನಾವೆಲ್ಲ ನಡೆಯೋಣ ಎಂದರು.
ಶಿಕ್ಷಕ ಮಲ್ಲಿಕಾರ್ಜುನ ಕುಬಕಡ್ಡಿ ಮಾತನಾಡಿ, ೧೨ನೇ ಶತಮಾನದಲ್ಲಿದ್ದ ಬಸವಣ್ಣನವರನ್ನು ನಾವು ನೋಡಿಲ್ಲ ಆದರೆ ಈಗ ೨೧ನೇ ಶತಮಾನದಲ್ಲಿ ಸಿದ್ದೇಶ್ವರ ಶ್ರೀಗಳಲ್ಲಿ ಕಂಡಿದ್ದೇವೆ. ಬಸವಣ್ಣನವರು ಸಮಾಜದ ಅಂಕು ಡೊಂಕುಗಳನ್ನು ವಚನಗಳ ಮೂಲಕ ತಿದ್ದಿದರೆ, ಸಿದ್ದೇಶ್ವರ ಶ್ರೀಗಳು ತಮ್ಮ ಪ್ರವಚನಗಳ ಮೂಲಕ ತಿದ್ದಲು ಪ್ರಯತ್ನಿಸಿದರು. ಬುದ್ಧ, ಬಸವ, ಅಂಬೇಡ್ಕರ್ ರಂತೆ ಸಿದ್ದೇಶ್ವರ ಶ್ರೀಗಳು ತಮ್ಮ ಜೀವನದಲ್ಲಿ ಅಧ್ಯಾತ್ಮದಿಂದ ಸಮಾಜವನ್ನು ತಿದ್ದುವ ಕೆಲಸ ಮಾಡಿದರು ಎಂದರು. ಅವರ ದೇಹದಿಂದ ನಮ್ಮನ್ನು ಅಗಲಿದ್ದಾರೆ ಆದರೆ ಆತ್ಮ ನಿಸರ್ಗದಲ್ಲಿ ಸದಾ ಇರುತ್ತದೆ ಅದನ್ನು ಗಿಡ, ಮರ,ಪ್ರಾಣಿ ಪಕ್ಷಿ,ಹೂವುಗಳಲ್ಲಿ ಕಾಣಬಹುದು ಎಂದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ನಾಗನಗೌಡ ಬಿರಾದಾರ, ಶಿವುಸಾವುಕಾರ ಹಳ್ಳೂರ, ಕಲ್ಲಪ್ಪ ಕೂಡಗಿ, ಜಗದೀಶ ಪಾಟೀಲ, ತಮ್ಮನೆಪ್ಪ ವಾಲಿಕಾರ,ಸಿದ್ದಪ್ಪ ರಕರಡ್ಡಿ, ಸುಭಾಷ ಹಳ್ಳೂರ,ಮುತ್ತಣ್ಣ ಕೂಡಗಿ, ಶ್ರೀಶೈಲ ಹೊನ್ಯಾಳ, ಮಹಾದೇವಪ್ಪ ನರಿಯವರ,ಮಲ್ಲಪ್ಪ ಅಗಸರ,ಮುದ್ದಪ್ಪ ಹಡಪದ,ಯಲಗೂರದಪ್ಪ ಹೊಸೂರ,ಬಸಪ್ಪ ಕೂಡಗಿ,ಹಣಮಂತ ಮಾದರ,ನಾಗಪ್ಪ ಮಾದರ, ಮಹಾದೇವಪ್ಪ ಮಾದರ ಹಾಗೂ ಮಕ್ಕಳು ಇದ್ದರು.
ಕೊಲ್ಹಾರ ಸಂಗಮೇಶ್ವರ ಶಾಲೆ : ಪಟ್ಟಣದ ಶ್ರೀ ಸಂಗಮೇಶ್ವರ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಬುಧವಾರ ಶಿವೈಕ್ಯ ಪರಮಪೂಜ್ಯ ಶ್ರೀ ಸಿದ್ದೇಶ್ವರ ಶ್ರೀಗಳಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಸಿದ್ದೇಶ್ವರ ಶ್ರೀಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮೌನಾಚಾರಣೆ ಮಾಡಿ ಸಂಗಮೇಶ್ವರ ಪ್ರೌಢ ಶಾಲೆಯ ಮುಖ್ಯ ಗುರುಗಳಾದ ರಾಜಶೇಖರ ಉಮರಾಣಿ ಮಾತನಾಡಿ, ಬಿಜ್ಜರಗಿ ಎಂಬ ಸಣ್ಣ ಗ್ರಾಮದ ಬಿರಾದಾರ ಎಂಬ ರೈತ ಕುಟುಂಬದಲ್ಲಿ ಹುಟ್ಟಿದ ಸಿದ್ದಗೊಂಡಪ್ಪ ನವರು, ಹುಟ್ಟೂರಲ್ಲಿ ಶಿಕ್ಷಣವನ್ನು ಪಡೆದು ಮಲ್ಲಿಕಾರ್ಜುನ ಸ್ವಾಮಿಗಳ ಪ್ರವಚನ ಕೇಳಿ ಸಿದ್ದೇಶ್ವರ ಶ್ರೀ ಗಳಾಗಿ ಪರಿವರ್ತಿತರಾಗಿ ಬಾಲ್ಯದಲ್ಲಿಯೇ ಆದ್ಯಾತ್ಮವನ್ನು ಅಳವಡಿಸಿಕೊಂಡು ತಮ್ಮ ಇಡೀ ೮೨ವರ್ಷದ ಜೀವನವನ್ನು ಈ ಸಮಾಜಕ್ಕೆ ಸಲ್ಲಿಸಿದರು. ಅವರ ನುಡಿದ ಪ್ರವಚನಗಳು ಸದಾ ಕಾಲ ಈ ಭೂಮಿ ಇರುವವರೆಗೆ ಇರುತ್ತವೆ. ಅವರು ಆಡಿದಂತ ನುಡಿಗಳನ್ನು ನಮ್ಮ ಜೀವನದ ಉದ್ದಕ್ಕೂ ಅಳವಡಿಸಿಕೊಂಡು ಹೋಗೋಣ. ಇವತ್ತು ವಿಜಯಪುರ ಜಿಲ್ಲೆ ಅವರನ್ನು ಕಳೆದುಕೊಂಡು ಅನಾಥವಾಗಿದೆ. ಜ್ಞಾನವನ್ನು ನೀಡಿದಂತಹ ಜ್ಞಾನ ಯೋಗಾಶ್ರಮ ಜ್ಞಾನ ಯೋಗಿಗಾಗಿ ಕಾಯುತ್ತಿದೆ ಅವರು ಮತ್ತೆ ಕಲ್ಯಾಣದ ಉದ್ದಾರಕ್ಕಾಗಿ ಹುಟ್ಟಿ ಬರಲಿ ಎಂದು ಪ್ರಾರ್ಥಿಸಿದರು.

ಸಂಗಮೇಶ್ವರ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಯಲ್ಲಪ್ಪ ಶಿರೋಳ ಮಾತನಾಡಿ, ಸಿದ್ದೇಶ್ವರ ಶ್ರೀಗಳು ನಮಗೆ ಸಾಕ್ಷಾತ ದೇವರಾಗಿದ್ದರು. ಅವರ ಒಂದು ಸರಳ ಜೀವನ ನಮ್ಮೆಲ್ಲರಿಗೆ ಇಂದು ಮಾದರಿ. ಅವರ ಪ್ರವಚನಗಳು ಈ ಭಾಗದಲ್ಲಿ ಎಲ್ಲಾದರೂ ನಡೆಯತಿದ್ದರೆ ಸುಮಾರು ೨೦ಕಿ ಮೀ ನಿಂದ ಬೆಳಿಗ್ಗೆ ಚಳಿ, ಮಳೆ ಲೆಕ್ಕಿಸದೆ ಬಂದು ಕೇಳಿ, ಆಶೀರ್ವಾದ ಪಡೆದುಕೊಂಡು ಜನ ಮರಳಿ ಮನೆಗೆ ಹೋಗುತಿದ್ದರು. ಹೀಗಾಗಿ ಅವರ ಪ್ರವಚನದಲ್ಲಿ ಒಂದು ದೊಡ್ಡ ದೈವಿ ಶಕ್ತಿಯಿತ್ತು. ಇಂತಹ ಮಹಾತ್ಮ ಇನ್ನು ಮುಂದೆ ಹುಟ್ಟಲು ಸಾಧ್ಯವಿಲ್ಲ ಎಂದರು.
ಈ ಸಂದರ್ಭದಲ್ಲಿ ದೈಹಿಕ ಶಿಕ್ಷಕ ಮಲ್ಲಿಕಾರ್ಜುನ ಕುಬಕಡ್ಡಿ ಮಾತನಾಡಿ, ದಕ್ಷಿಣಕ್ಕೆ ಸಿದ್ದಗಂಗೆ, ಉತ್ತರಕ್ಕೆ ಜ್ಞಾನಗಂಗೆ ಇವು ನಮ್ಮ ನಾಡಿನ ಎರಡು ಕೈಲಾಸಗಳು ಇದ್ದಂತೆ. ಸಿದ್ದ ಗಂಗೆಯ ಶಿವಕುಮಾರ ಸ್ವಾಮೀಜಿಗಳು ನಾಡಿನ ಬಡ ಮಕ್ಕಳಿಗೆ ಅಕ್ಷರ,ಅನ್ನ, ಆಶ್ರಯ ನೀಡಿದರೆ, ಜ್ಞಾನ ಗಂಗೆಯ ಸಿದ್ದೇಶ್ವರ ಶ್ರೀಗಳು ನಾಡಿನ ಜನರಿಗೆ ಆಧ್ಯಾತ್ಮದ ಮೂಲಕ ಪ್ರವಚನ ನೀಡಿ ನಡೆದಾಡುವ ದೇವರಾಗಿ ಜನಮಾನಸದಲ್ಲಿ ಉಳಿದರು.ಭಾರತ ದೇಶ ಹಾಗೂ ಕನ್ನಡ ನಾಡು ಇವರನ್ನು ಎಂದು ಮರೆಯಲು ಸಾಧ್ಯವಿಲ್ಲ ಎಂದರು.
ಈ ಸಂದರ್ಭದಲ್ಲಿ ಶಾಲೆಯ ಸಿಬ್ಬಂದಿ ವರ್ಗದವರು, ಮಕ್ಕಳು ಇದ್ದರು.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

16 − six =