ಮೋದಿ ವಿರುದ್ದ ಹೇಳಿಕೆ : ಬೆಳಗಾವಿಯಲ್ಲಿ ಬಿಜೆಪಿ ಬೀದಿಗಿಳಿದು ಪ್ರತಿಭಟನೆ!

ಯುವ ಭಾರತ ಸುದ್ದಿ ಬೆಳಗಾವಿ: ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಪಾಕಿಸ್ತಾನ ಸಚಿವ ಬಿಲಾವಲ್ ಭುಟ್ಟೊ ವಿರುದ್ಧ ಜಿಲ್ಲಾ ಬಿಜೆಪಿ ವತಿಯಿಂದ ಶನಿವಾರ ಪ್ರತಿಭಟನೆ ನಡೆಸಲಾಯಿತು.ನಗರದ ಚನ್ನಮ್ಮ ವೃತ್ತದಲ್ಲಿ ಬಿಲಾವಲ್ ಭುಟ್ಟೊ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು ಪಾಕಿಸ್ತಾನ ಮುರ್ದಾಬಾದ್ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಉತ್ತರ ಕ್ಷೇತ್ರದ ಶಾಸಕ ಅನಿಲ್ ಬೆನಕೆ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ದೇಶ ಕಂಡ ಅಪ್ರತಿಮ ನಾಯಕ. ಜಗತ್ತಿನಲ್ಲಿಯೇ ಪ್ರಭಾವಿ ನಾಯಕನಾಗಿ ಬೆಳೆದಿದ್ದಾರೆ. ವಿಶ್ವಗುರು ಎಂಬ ಪಟ್ಟವೂ ಸಿಕ್ಕಿದೆ. ಭಯೋತ್ಪಾದನೆಯನ್ನು ಜಗತ್ತಿನಿಂದ ನಿರ್ಮೂಲನೆ ಮಾಡುವ ಛಲ ಹೊಂದಿದ್ದಾರೆ. ಇಂಥ ಮಹಾ ನಾಯಕನ ಬಗ್ಗೆ ಪಾಕಿಸ್ತಾನದ ಸಚಿವ ಬಿಲಾವಲ್ ಭುಟ್ಟೊ ಅವಹೇಳನಕಾರಿಯಾಗಿ ಮಾತನಾಡಿದ್ದು ಖಂಡನಾರ್ಹ ಎಂದು ಕಿಡಿಕಾರಿದರು.
ಭಯೋತ್ಪಾದಕರಿಗೆ ಪಾಕಿಸ್ತಾನ ಮೊದಲಿನಿಂದಲೂ ರಕ್ಷಣೆ ನೀಡುತ್ತ ಬಂದಿದೆ. ಇಂಥ ದೇಶದ ಸಚಿವನಾಗಿರುವ ಭುಟ್ಟೊ ನಮ್ಮ ಪ್ರಧಾನಿ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ. ಪಾಕಿಸ್ತಾನ ಯಾವಾಗಲೂ ನಮ್ಮ ವೈರಿ ದೇಶ. ನಮ್ಮ ಪ್ರಧಾನಿ ಮೋದಿ ಬಗ್ಗೆ ಮಾತನಾಡಿರುವ ಭುಟ್ಟೊ ಕೂಡಲೇ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ, ಮುಖಂಡರಾದ ಮುರುಘೇಂದ್ರಗೌಡ ಪಾಟೀಲ, ಮಲ್ಲಿಕಾರ್ಜುನ ಮಾದಮ್ಮನವರ, ಲೀನಾ ಟೋಪಣ್ಣವರ, ಭೀಮಶಿ ಭರಮನ್ನವರ, ದಿಗ್ವಿಜಯ ಸಿದ್ನಾಳ, ಬಸವರಾಜ ನೇಸರಗಿ, ಪೃಥ್ವಿ ಸಿಂಗ್ ಸೇರಿದಂತೆ ಇತರರು ಇದ್ದರು.
YuvaBharataha Latest Kannada News