Breaking News

ಪುರಸ್ಕಾರಗಳು ಹೋರಾಟಕ್ಕೆ ನೈತಿಕ ಬಲ ತುಂಬುತ್ತವೆ: ಡಾ.ಎಂ.ಎಸ್.ಆಶಾದೇವಿ ಅಭಿಮತ

Spread the love

ಪುರಸ್ಕಾರಗಳು ಹೋರಾಟಕ್ಕೆ ನೈತಿಕ ಬಲ ತುಂಬುತ್ತವೆ: ಡಾ.ಎಂ.ಎಸ್.ಆಶಾದೇವಿ ಅಭಿಮತ

ಯುವ ಭಾರತ ಸುದ್ದಿ ಬೆಂಗಳೂರು: ನಾಡು ಇವತ್ತು ಸಾಂಸ್ಕೃತಿಕ ಬಿಕ್ಕಟ್ಟಿನಲ್ಲಿ ಇದ್ದು ಅದಕ್ಕೆ ನೈತಿಕ ಬೆಂಬಲ ನೀಡುವ ಪುರಸ್ಕಾರಗಳು ಅಗತ್ಯವಾಗಿದೆ ಎಂದು ಖ್ಯಾತ ವಿಮರ್ಶಕಿ ಡಾ.ಎಂ.ಆಶಾದೇವಿ ಅಭಿಪ್ರಾಯ ಪಟ್ಟರು.

ನಾಲ್ವಡಿ ಕೃಷ್ಣರಾಜ ಒಡೆಯರು ನಿಜವಾದ ಪ್ರಜಾಪ್ರಭುತ್ವ ಸ್ಥಾಪಕರಾಗಿದ್ದು ಕನ್ನಡ ಸಾಹಿತ್ಯ ಪರಿಷತ್ತನ್ನು ಸಾಂಸ್ಕೃತಿಕ ಆಶಯಗಳಿಂದ ಸ್ಥಾಪಿಸಿದರು. ಈ ಉನ್ನತ ಆಶಯವನ್ನು ಪರಿಷತ್ತು ಮುಂದುವರೆಸಿ ಕೊಂಡು ಬರುತ್ತಿರುವುದು ಸಂತೋಷದ ಸಂಗತಿ ಎಂದು ಅವರು ಹೇಳಿದರು. ಈ ಪುರಸ್ಕಾರವನ್ನು ಪಡೆದವರೆಲ್ಲರೂ ಹೋರಾಟದ ಬದುಕನ್ನು ನಡೆಸಿದವರು ಅವರ ಹೋರಾಟವನ್ನು ಗುರುತಿಸಿ ಪರಿಷತ್ತು ಗೌರವಿಸಿರುವುದು ಸಾಮಾಜಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಕೂಡ ಬಹಳ ಮುಖ್ಯವಾದ ಸಂಗತಿಯಾಗಿದೆ ಎಂದರು. ಕನ್ನಡದ ಹೋರಾಟಗಳು ಸದಾ ಹನ್ನೆರಡನೇ ಶತಮಾನದ ಶರಣರಿಂದ ಮತ್ತು ಇಪ್ಪತ್ತನೆಯ ಶತಮಾನದ ಚಿಂತಕರಿಂದ ಸ್ಪೂರ್ತಿಯನ್ನು ಪಡೆಯುತ್ತಾ ಬಂದಿವೆ. ಇವತ್ತಿನ ಬಿಕ್ಕಟ್ಟಿನ ಕಾಲದಲ್ಲಿ ಹೋರಾಟಗಳಿಗೆ ಮರು ಜೀವ ತುಂಬುವ ಕೆಲಸವನ್ನು ಇಂತಹ ಪುರಸ್ಕಾರಗಳು ಮಾಡಲಿ ಎಂದು ಅವರು ಆಶಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ವಿಶ್ರಾಂತ ಆಡಳಿತಗಾರರು ಮತ್ತು ಸಾಂಸ್ಕೃತಿಕ ಚಿಂತಕರಾದ ಬಿ.ಆರ್.ಜಯರಾಮ ರಾಜೇ ಅರಸ್ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತು ಪಾರದರ್ಶಕವಾಗಿ ಪುರಸ್ಕಾರಗಳನ್ನು ನೀಡುವ ಮೂಲಕ ತನ್ನ ಶ್ರೀಮಂತ ಪರಂಪರೆಯನ್ನು ಮುಂದುವರೆಸಿ ಕೊಂಡು ಬಂದಿದೆ. ಇಂದಿನ ಪ್ರಶಸ್ತಿ ಪುರಸ್ಕೃತರೆಲ್ಲರೂ ಹಿರಿದಾದ ಸಾಧನೆಯನ್ನು ಮಾಡಿದವರು. ಅವರನ್ನು ಗುರುತಿಸುವ ಮೂಲಕ ತಮ್ಮ ಸಾಮಾಜಿಕ ಹೊಣೆಗಾರಿಕೆಯನ್ನೂ ವ್ಯಕ್ತಪಡಿಸಿರುವುದು ಸ್ವಾಗತಾರ್ಹ ಸಂಗತಿ ಡಾ.ಅಕ್ಕಯ್ ಪದ್ಮಶಾಲಿಯವರು ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದವರು, ಮಾಹಿತಿ ಹಕ್ಕು ಹೋರಾಟಗಾರರು ಅನೇಕ ಕಷ್ಟಗಳನ್ನು ಎದುರಿಸಿ ಸಮಾಜದ ಆರೋಗ್ಯವನ್ನು ಕಾಪಾಡುತ್ತಿರುವವರು, ಸಾಹಿತ್ಯ ಲೋಕದಲ್ಲಿ ಮಹತ್ತರ ಸಾಧನೆ ಮಾಡಿಯೂ ಎಲೆಮರೆಯಂತೆ ಇರುವವರಿಗೆ ಇವತ್ತಿನ ಪುರಸ್ಕಾರ ದೊರೆತಿದೆ ಇದು ಸಮಕಾಲೀನ ಸಂದರ್ಭದಲ್ಲಿ ಬಹಳ ಮುಖ್ಯವಾದ ಸಂಗತಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಕ್ಷ ಬಿ.ಎಂ.ಪಟೇಲ್ ಪಾಂಡು ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಎರಡು ಸಾವಿರಕ್ಕೂ ಮಿಕ್ಕು ದತ್ತಿ ನಿಧಿಗಳಿದ್ದು ಇದನ್ನು ಅರ್ಹರಿಗೆ ನೀಡುವ ಮೂಲಕ ಕನ್ನಡ ಸಾಹಿತ್ಯ ಪರಿಷತ್ತು ಉನ್ನತ ಪರಂಪರೆಯನ್ನು ನಿರ್ಮಿಸಿದೆ ನಾಡೋಜ. ಡಾ.ಮಹೇಶ ಜೋಶಿಯವರು ಅಧ್ಯಕ್ಷರಾದ ನಂತರ ದತ್ತಿ ಪುರಸ್ಕಾರಗಳಿಗೆ ಹೊಸ ರೂಪವನ್ನು ನೀಡಿದ್ದು ಅನೇಕ ಬೆಳಕಿಗೆ ಬಾರದ ಸಾಧಕರನ್ನು ಗುರುತಿಸುವ ಕಾರ್ಯ ಈ ಮೂಲಕ ನಡೆಯುತ್ತಿದೆ ಎಂದರು.

ಫಾದರ್ ಚಸರಾ ಕನ್ನಡ ಸಂಸ್ಕೃತಿ ದತ್ತಿಯನ್ನು ಡಾ.ಅಕ್ಕಯ್ ಪದ್ಮಶಾಲಿ ಮತ್ತು ರೆವರೆಂಡ್.ಡಾ.ಡಿ.ಮನೋಹರಚಂದ್ರ ಪ್ರಸಾದ್ ಅವರಿಗೆ ಮಾಹಿತಿ ಹಕ್ಕು ತಜ್ಞ ಜಿ.ಎಂ.ರಾಜಶೇಖರ ದತ್ತಿ ಪ್ರಶಸ್ತಿಯನ್ನು ಡಾ.ಕೋಡೂರ್ ವೆಂಕಟೇಶ್ ಮತ್ತು ವೀರೇಶ್ ಬೆಳ್ಳೂರ್ ಅವರಿಗೆ ದಿ.ಟಿ.ಶ್ರೀನಿವಾಸ ಸ್ಮರಣಾರ್ಥ ಪಿ.ಕೆ.ನಾರಾಯಣ ಸಾಹಿತ್ಯ ದತ್ತಿಯನ್ನು ಡಾ.ಸುರೇಶ ಪಾಟೀಲ ಮತ್ತು ಪ್ರೊ.ಎಲ್.ವಿ.ಶಾಂತ ಕುಮಾರಿಯವರಿಗೂ ನೀಡಿ ಗೌರವಿಸಲಾಯಿತು. ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ನೇ.ಭ.ರಾಮಲಿಂಗ ಶೆಟ್ಟಿಯವರು ಸ್ವಾಗತಿಸಿದರೆ ಕೆ.ಮಹಾಲಿಂಗಯ್ಯ ಅವರು ವಂದನಾರ್ಪಣೆಯನ್ನು ಸಲ್ಲಿಸಿದರು. ಎನ್.ಎಸ್.ಶ್ರೀಧರ ಮೂರ್ತಿ ಕಾರ್ಯಕ್ರಮವನ್ನು ನಿರೂಪಿಸಿದರು.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

one + eighteen =