ನವರಾತ್ರಿ ಉತ್ಸವದಲ್ಲಿ ನಂದಿನಿಯ ಸಿಹಿ ಉತ್ಪನ್ನಗಳ ದಾಖಲೆಯ ಮಾರಾಟ|| ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ..!

ಯುವ ಭಾರತ ಸುದ್ದಿ, ಗೋಕಾಕ್ : ನವರಾತ್ರಿ ಹಬ್ಬದ ಆಚರಣೆ ಸಂದರ್ಭದಲ್ಲಿ 120 ಮೆಟ್ರಿಕ್ ಟನ್ ಸಿಹಿ ಉತ್ಪನ್ನಗಳನ್ನು ಮಾರಾಟ ಮಾಡುವ ಮೂಲಕ ಕೆಎಂಎಫ್ ಹೊಸ ದಾಖಲೆ ಸೃಷ್ಟಿಮಾಡಿದೆ ಎಂದು ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಮಂಗಳವಾರದಂದು ನಗರದ ಗೋಕಾಕ ಫಾಲ್ಸ್ ರಸ್ತೆಯ ಜೆಎಸ್ಎಸ್ ಕಾಲೇಜ್ ಕಾಂಪ್ಲೆಕ್ಸ್ ನಲ್ಲಿ ನೂತನವಾಗಿ ಆರಂಭಿಸಲಾದ ನಂದಿನಿ ಎಕ್ಸ್ ಕ್ಲೂಸಿವ್ ಪಾರ್ಲರ್ ಉದ್ಘಾಟಿಸಿ ಅವರು ಮಾತನಾಡಿದರು.
ನವರಾತ್ರಿಯ ಒಂಬತ್ತು ದಿನಗಳ ಅವಧಿಯಲ್ಲಿ ಸಿಹಿ ಉತ್ಪನ್ನಗಳನ್ನು ಗ್ರಾಹಕರಿಗೆ ತಲುಪಿಸಿ ನಮ್ಮ ಸಂಸ್ಥೆಯ ಮಾರಾಟ ಪ್ರಮಾಣವು ಇದುವರೆಗಿದ್ದ ಎಲ್ಲ ದಾಖಲೆಗಳನ್ನು ಅಳಿಸಿ ಮಾರಾಟ ಪ್ರಮಾಣದಲ್ಲಿ ಹೊಸ ದಾಖಲೆ ಬರೆದಿದೆ ಎಂದು ಹೇಳಿದರು.
ಕೆಎಂಎಫ್ನಿಂದ ಬಿಹಾರ ಫೆಡರೇಷನ್ಗೆ 1500 ಮೆ.ಟನ್ ಕೆನೆಭರಿತ ಹಾಲಿನ ಪುಡಿ, 650 ಮೆ.ಟನ್ ಕೆನೆ ರಹಿತ ಹಾಲಿನ ಪುಡಿ ಮತ್ತು 800 ಮೆ.ಟನ್ ಬೆಣ್ಣೆಯನ್ನು ಮಾರಾಟ ಮಾಡಲು ಆದೇಶವನ್ನು ನೀಡಲಾಗಿದೆ. ಪ್ರಸ್ತುತ ಬೆಣ್ಣೆ 12.6 ಮೆ.ಟನ್ ದಾಸ್ತಾನು ಇದ್ದು, ಪ್ರಸ್ತುತ ಕೆನೆ ರಹಿತ ಹಾಲಿನ ಪುಡಿ 27.5 ಮೆ.ಟನ್ ದಾಸ್ತಾನು ಇರುತ್ತದೆ. ಕೆಎಂಎಫ್ನ ಒಟ್ಟಾರೆ ಹಾಲಿನ ಶೇಖರಣೆ ಪ್ರತಿದಿನ 80 ಲಕ್ಷ ಲೀಟರ್ ಇದೆ ಎಂದು ಹೇಳಿದರು.
ಹಾಲಿನ ಮತ್ತು ಮೊಸರು, ಗುಡ್ಲೈಫ್ ಮತ್ತು ಫ್ಲೆಕ್ಸಿ ಹಾಲಿನ ಮಾರಾಟ ಒಟ್ಟಾರೆ ದಿನಂಪ್ರತಿ 45.80 ಲಕ್ಷ ಲೀಟರ್ ಗಳಾಗಿದ್ದು, ಇತರೇ ಹೊರ ರಾಜ್ಯದ ಸಹಕಾರಿ ಡೇರಿಗಳಿಗೆ ಸಗಟು ಹಾಲಿನ ಮಾರಾಟ ದಿನಂಪ್ರತಿ 3.52 ಲಕ್ಷ ಲೀಟರ್ ಇದೆ ಎಂದು ಹೇಳಿದ ಅವರು, ರಾಜ್ಯಾದ್ಯಂತ ಪ್ರಸ್ತುತ 1462 ನಂದಿನಿ ಪಾರ್ಲರ್ ಮತ್ತು 220ಕ್ಕೂ ಅಧಿಕ ನಂದಿನಿ ಶಾಪ್ಪಿಗಳಿವೆ ಎಂದು ಹೇಳಿದರು.
ಗೋಕಾಕದಲ್ಲಿ ಆರಂಭಿಸಲಾಗಿರುವ ನಂದಿನಿ ಶೇಖರಣಾ ಕೇಂದ್ರದಲ್ಲಿ ನಂದಿನಿಯ ಎಲ್ಲ ಬಗೆಯ ಉತ್ಪನ್ನಗಳು ಗ್ರಾಹಕರಿಗೆ ಎಂಆರ್ ಪಿ ಬೆಲೆಯಲ್ಲಿ ಲಭ್ಯವಿವೆ. ಬೆಳಗಾವಿ ಜಿಲ್ಲೆಯಲ್ಲಿ ರಾಮದುರ್ಗ, ಬೈಲಹೊಂಗಲ, ರಾಯಬಾಗ, ಖಾನಾಪೂರ ಮತ್ತು ಗೋಕಾಕದಲ್ಲಿ ಪಾರ್ಲರ್ ಗಳನ್ನು ತೆರೆಯಲಾಗಿದೆ. ಗ್ರಾಹಕರಿಗೆ ಉತ್ತಮ ರೀತಿಯಲ್ಲಿ ಸೇವೆ ಒದಗಿಸುವ ಹಿನ್ನೆಲೆಯಲ್ಲಿ ಇಂತಹ ಪಾರ್ಲರ್ಗಳನ್ನು ತೆರೆಯಲಾಗುತ್ತಿದೆ. ಪ್ರತಿ ತಾಲೂಕು ಕೇಂದ್ರಗಳಲ್ಲಿ ಇಂತಹ ಶೇಖರಣಾ ಕೇಂದ್ರಗಳನ್ನು ಆರಂಭಿಸುವ ಮೂಲಕ ಪ್ರತಿ ಹಳ್ಳಿ-ಹಳ್ಳಿಗಳಿಗೆ ನಂದಿನಿ ಎಲ್ಲ ಉತ್ಪನ್ನಗಳನ್ನು ಗ್ರಾಹಕರಿಗೆ ತಲುಪಿಸುವ ಉದ್ಧೇಶ ಹೊಂದಲಾಗಿದೆ. ಗ್ರಾಹಕರ ಮತ್ತು ರೈತರ ಸಹಕಾರವೇ ನಮ್ಮ ಸಂಸ್ಥೆಗೆ ದೊಡ್ಡ ಶಕ್ತಿಯಾಗಿದೆ ಎಂದು ಹೇಳಿದರು.
ಹಾಲು ಉತ್ಪಾದಕರಿಂದ ಗರಿಷ್ಠ ಬೆಲೆಗೆ ಹಾಲು ಖರೀದಿ ಮಾಡಿ, ಕನಿಷ್ಠ ಲಾಭದೊಂದಿಗೆ ಗ್ರಾಹಕರಿಗೆ ತಲುಪಿಸುವ ಕಾರ್ಯವನ್ನು ನಮ್ಮ ಕೆಎಂಎಫ್ ಮಾಡುತ್ತಿದೆ. ಒಟ್ಟಿನಲ್ಲಿ ದೇಶದ ಇತರೇ ಎಲ್ಲ ಹಾಲು ಒಕ್ಕೂಟಗಳಿಗಿಂತ ವಿಭಿನ್ನ ರೀತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಈ ಹಾಲು ಒಕ್ಕೂಟ ರಾಷ್ಟ್ರದ ಅಭಿವೃದ್ಧಿಗೆ ತನ್ನದೇಯಾದ ವಿಶಿಷ್ಟ ಕೊಡುಗೆ ನೀಡುತ್ತಿದೆ. ಜೊತೆಗೆ ಸಾಮಾಜಿಕ ಕಾರ್ಯಗಳ ಮೂಲಕವು ಸಂಸ್ಥೆ ಹೆಮ್ಮೆಯ ಸಾಧನೆ ಮಾಡುತ್ತಿದೆ. ಕೊರೋನಾ ಮಹಾಮಾರಿಯ ಸಂದರ್ಭದಲ್ಲಿ ಕೆಎಂಎಫ್ ರೈತರ ಹಾಗೂ ಗ್ರಾಹಕರ ಅಭ್ಯುದಯಕ್ಕಾಗಿ ನಿರಂತರ ಸೇವೆ ಮಾಡಿದೆ. ಸಂಕಷ್ಟದ ಕಾಲದಲ್ಲೂ ಕೆಎಂಎಫ್ ವತಿಯಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಒಟ್ಟು 8 ಕೋಟಿ ರೂ.ಗಳ ದೇಣಿಗೆ ನೀಡಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಮಲ್ಲಪ್ಪ ಪಾಟೀಲ, ವ್ಯವಸ್ಥಾಪಕ ನಿರ್ದೇಶಕ ಓಬೇದುಲ್ಲಾಖಾನ್, ಮಾರುಕಟ್ಟೆ ಉಪವ್ಯವಸ್ಥಾಪಕ ಜಯಾನಂದ ಶಂಕಿನಮಠ, ತಾಂತ್ರಿಕ ವಿಭಾಗದ ಉಪವ್ಯವಸ್ಥಾಪಕ ಮಲ್ಲಿಕಾರ್ಜುನಸ್ವಾಮಿ, ಸೇರಿದಂತೆ ಹಲವರು ಉಪಸ್ಥಿತರಿದ್ದರು.
YuvaBharataha Latest Kannada News