Breaking News

ಯಡಿಯೂರಪ್ಪಗೆ ಮಹತ್ವದ ಜವಾಬ್ದಾರಿ ?

Spread the love

ಯಡಿಯೂರಪ್ಪಗೆ ಮಹತ್ವದ ಜವಾಬ್ದಾರಿ ?

ಯುವ ಭಾರತ ಸುದ್ದಿ ಬೆಂಗಳೂರು:
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಬಿಜೆಪಿಯ ಚುನಾವಣಾ ಪ್ರಚಾರ ಸಮಿತಿಯ ಮುಖ್ಯಸ್ಥರನ್ನಾಗಿ ನೇಮಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಆ ಮೂಲಕ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮತದಾರರನ್ನು ಸೆಳೆಯಲು ಪಕ್ಷ ಬಯಸುತ್ತದೆ.
ಈ ವಾರ 80ನೇ ವರ್ಷಕ್ಕೆ ಕಾಲಿಟ್ಟ ಯಡಿಯೂರಪ್ಪ ಅವರು ಈ ಚುನಾವಣೆಗಳಲ್ಲಿ ಸ್ಪರ್ಧಿಸುವುದಿಲ್ಲ ಎಂದು ಈಗಾಗಲೇ ಘೋಷಿಸಿದ್ದಾರೆ. ಅವರು ಕರ್ನಾಟಕ ಬಿಜೆಪಿಯ ಅತಿ ಎತ್ತರದ ನಾಯಕರಾಗಿದ್ದಾರೆ ಮತ್ತು ಮತದಾರರನ್ನು ಸೆಳೆಯುವ ಶಕ್ತಿ ಇರುವ ನಾಯಕರಾಗಿದ್ದಾರೆ.
ಇತ್ತೀಚಿಗೆ ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾಜಿ ಮುಖ್ಯಮಂತ್ರಿಯನ್ನು ಹೊಗಳಿದ್ದು, ಅವರ ಕಣ್ಣಲ್ಲಿ ನೀರು ಬರುವಂತೆ ಮಾಡಿದೆ. ಶಿವಮೊಗ್ಗ ವಿಮಾನ ನಿಲ್ದಾಣದ ಉದ್ಘಾಟನಾ ಸಮಾರಂಭದಲ್ಲಿ, ಪ್ರಧಾನಿ ಮೋದಿ ಅವರು ನಾಲ್ಕು ಬಾರಿ ಮುಖ್ಯಮಂತ್ರಿಯಾದ ಅವರ 80 ನೇ ಜನ್ಮದಿನದಂದು ಶ್ಲಾಘಿಸಿದರು ಮತ್ತು ಸಾರ್ವಜನಿಕ ಜೀವನಕ್ಕೆ ಅವರು ನೀಡಿದ ಕೊಡುಗೆಗಳನ್ನು “ಸ್ಫೂರ್ತಿದಾಯಕ” ಎಂದು ಬಣ್ಣಿಸಿದರು.

ಸಮಾವೇಶದಲ್ಲಿ ಯಡಿಯೂರಪ್ಪ ಅವರಿಗೆ ಬಾಗಿ ನಮಸ್ಕರಿಸಿದರು.
ಪ್ರಧಾನಿ ಮೋದಿ ನಾಲ್ಕು ಬಾರಿ ಮುಖ್ಯಮಂತ್ರಿಗಳಾಗಿದ್ದವರಿಗೆ ಗೌರವ ಸೂಚಕವಾಗಿ ತಮ್ಮ ಮೊಬೈಲ್ ಫೋನ್ ಲೈಟ್‌ಗಳನ್ನು ಫ್ಲ್ಯಾಷ್ ಮಾಡಲು ಸಮಾವೇಶದಲ್ಲಿದ್ದ ಜನರಿಗೆ ಮನವಿ ಮಾಡುವ ಮೂಲಕ ಸ್ವತಃ ಯಡಿಯೂರಪ್ಪ ಅವರಿಗೇ ಅಚ್ಚರಿ ಮೂಡಿಸಿದರು. ಇದಕ್ಕೆ ಭಾರೀ ಸಂಖ್ಯೆಯಲ್ಲಿ ಸೇರಿದ್ದ ಜನರಿಂದ ಉತ್ಸಾಹಭರಿತ ಪ್ರತಿಕ್ರಿಯೆ ವ್ಯಕ್ತವಾಯಿತು. ಯಡಿಯೂರಪ್ಪ ತನ್ನ ಭಾಷಣವನ್ನು ಮುಗಿಸುತ್ತಿದ್ದಂತೆ, ಪ್ರಧಾನಿ ಮೋದಿ ಎದ್ದು ನಿಂತು ಅವರನ್ನು ಶ್ಲಾಘಿಸಿದರು.

ಮೋದಿಯವರ ಈ ನಡೆ ಮುಂಬರುವ ಚುನಾವಣಾ ಪ್ರಚಾರದ ಮುಖ್ಯಪಾತ್ರಧಾರಿಯಾಗಿ ಯಡಿಯೂರಪ್ಪ ಅವರರಿಗೆ ಹೊಣೆಗಾರಿಕೆ ನೀಡಲು ಬಿಜೆಪಿ ಬಯಸುತ್ತದೆ ಎಂಬ ಊಹಾಪೋಹಕ್ಕೆ ಕಾರಣವಾಗಿದೆ.

ಕಳೆದ ವಾರ ನಡೆದ ಸಾರ್ವಜನಿಕ ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಧಾನಿ ಮೋದಿ ಯಡಿಯೂರಪ್ಪ ಅವರ ಮೇಲೆ ನಂಬಿಕೆ ಇಟ್ಟು ಬಿಜೆಪಿಗೆ ಮತ ನೀಡಿ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ತರುವಂತೆ ಜನರಿಗೆ ಮನವಿ ಮಾಡಿದರು.

ಬಿಜೆಪಿ ಕೇಂದ್ರ ನಾಯಕತ್ವವು ಜುಲೈ 2021 ರಲ್ಲಿ ವಯಸ್ಸಿನ ಕಾರಣದಿಂದ ಯಡಿಯೂರಪ್ಪನವರಿಗೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಸೂಚಿಸಿತು. ಆದರೆ ಕೆಲವರು ಪಕ್ಷವು ರಾಜ್ಯದಲ್ಲಿ ಹೊಸ ನಾಯಕತ್ವವನ್ನು ಬೆಳೆಸಲು ಇದು ಪಕ್ಷದ ಕ್ರಮದ ಭಾಗವಾಗಿದೆ ಎಂದೂ ಹೇಳುತ್ತಾರೆ.
ನಾನು ಕರ್ನಾಟಕದ ಜನತೆಗೆ ಹೇಳುತ್ತೇನೆ, ನಾನು ರಾಜಕೀಯದಿಂದ ನಿವೃತ್ತಿಯಾಗುವುದಿಲ್ಲ, ನಾನು ದಣಿದಿಲ್ಲ, ನಾನು ಪ್ರಚಾರ ಮಾಡಿ ಬಿಜೆಪಿಯನ್ನು ಅಧಿಕಾರಕ್ಕೆ ತರುತ್ತೇನೆ, ನಾನು ರಾಜ್ಯಾದ್ಯಂತ ಪ್ರವಾಸ ಮಾಡುತ್ತೇನೆ ಎಂದು ಯಡಿಯೂರಪ್ಪ ಈಗಾಗಲೇ ಅನೇಕ ಕಡೆಗಳಲ್ಲಿ ಅಷ್ಟೇ ಏಕೆ ವಿಧಾನಸಭೆಯಲ್ಲಿ ತಮ್ಮ ಕೊನೆಯ ಭಾಷಣದಲ್ಲಿಯೂ ಹೇಳಿದ್ದಾರೆ. ವಿಧಾನಸಭೆಯ ವಿದಾಯ ಭಾಷಣದಲ್ಲಿ ಯಡಿಯೂರಪ್ಪ ಅವರು ಪಕ್ಷವನ್ನು ಕಟ್ಟಲು ಮತ್ತು “ತಮ್ಮ ಕೊನೆಯ ಉಸಿರು ಇರುವವರೆಗೂ” ಬಿಜೆಪಿಯನ್ನು ಅಧಿಕಾರಕ್ಕೆ ತರಲು ಶ್ರಮಿಸುವುದಾಗಿ ಹೇಳಿದರು.

ಇದು ಪಕ್ಷವು ಯಡಿಯೂರಪ್ಪ ಅವರಿಗೆ ಪಕ್ಷವು ಮಹತ್ವ ನೀಡುವುದಕ್ಕೆ ಮನಸ್ಸು ಮಾಡಿದೆ ಎಂಬುದರ ಸೂಚನೆಯಾಗಿದೆ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ. ಯಾಕೆಂದರೆ ಕರ್ನಾಟಕದಲ್ಲಿ ಬಿಜೆಪಿಗೆ ಯಡಿಯೂರಪ್ಪ ಅವರಂಥ ಮತದಾರರನ್ನು ಸೆಳೆಯುವ ಮತ್ತೊಬ್ಬ ನಾಯಕನ ಕೊರತೆಯಿದೆ. ಇದ್ದರೂ ಅವರು ನಿರ್ದಿಷ್ಟ ಪ್ರದೇಶಕ್ಕೆ ಸೀಮಿತವಾಗಿದ್ದಾರೆ. ಹೀಗಾಗಿ ಇತ್ತೀಚಿನ ದಿನಗಳಲ್ಲಿ ಯಡಿಯೂರಪ್ಪ ಅವರಿಗೆ ಪಕ್ಷದ ಹೈಕಮಾಂಡ್‌ ಕೊಡುತ್ತಿರುವ ಮಹತ್ವ ನೋಡಿದರೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಅವರಿಗೆ ಮಹತ್ವದ ಜವಾಬ್ದಾರಿ ನೀಡುವುದು ನಿಚ್ಚಳವಾದಂತೆ ತೋರುತ್ತಿದೆ ಎಂದು ಅವರು ಹೇಳುತ್ತಾರೆ.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚಿಸಿದಾಗಲೆಲ್ಲ ಜನನಾಯಕ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದರು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲಲ್ಲು ಯಡಿಯೂರಪ್ಪ ಕಾರ್ಡ್‌ ಬಿಜೆಪಿಗೆ ಬೇಕಿದೆ. ಯಡಿಯೂರಪ್ಪ ಚುನಾವಣಾ ರಾಜಕೀಯಕ್ಕೆ ರಾಜೀನಾಮೆ ನೀಡಿದ್ದರೂ, 2023 ರ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ಗೆಲ್ಲುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಅಧಿಕಾರದಲ್ಲಿರುವ ದಕ್ಷಿಣ ಭಾರತದ ಏಕೈಕ ರಾಜ್ಯ ಕರ್ನಾಟಕದ ವಿಧಾನಸಭಾ ಚುನಾವಣೆ ಬಿಜೆಪಿಗೆ ಬಹಳ ಮಹತ್ವದ್ದು. ಇದರಲ್ಲಿ ಯಡಿಯೂರಪ್ಪ ಕೂಡ ಬಿಜೆಪಿಗೆ ಮಹತ್ವದ ಫ್ಯಾಕ್ಟರ್‌ ಆಗಿದ್ದಾರೆ. ಹೀಗಾಗಿಯೇ ಯಡಿಯೂರಪ್ಪ ಅವರನ್ನು ಬಿಜೆಪಿಯ ಚುನಾವಣಾ ಪ್ರಚಾರ ಸಮಿತಿಯ ಮುಖ್ಯಸ್ಥರನ್ನಾಗಿ ನೇಮಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

three × one =