ಡಿಕೆಶಿ ಶಿಕ್ಷಣ ಸಂಸ್ಥೆಗಳ ಮೇಲೆ ಸಿಬಿಐ ದಾಳಿ

ಯುವ ಭಾರತ ಸುದ್ದಿ ಬೆಂಗಳೂರು :
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ
ಇದೀಗ ಮತ್ತೆ ಸಂಕಷ್ಟ ಎದುರಾಗಿದೆ. ಇಡಿ, ಐಟಿ ದಾಳಿ ನಂತರ ಇದೀಗ ಅವರಿಗೆ ಸೇರಿರುವ ನ್ಯಾಷನಲ್ ಎಜುಕೇಶನ್ ಸೊಸೈಟಿಯ ಶಿಕ್ಷಣ ಸಂಸ್ಥೆಗಳ ಮೇಲೆ ಸಿಬಿಐ ಇಂದು ದಾಳಿ ನಡೆಸಿದೆ.
ಡಿಕೆಶಿ ಮಾಲಿಕತ್ವದ ಶಿಕ್ಷಣ ಸಂಸ್ಥೆಗಳು ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿದ್ದು ಡಿಕೆಶಿ ಅಧ್ಯಕ್ಷರಾಗಿದ್ದು ಪುತ್ರಿ ಐಶ್ವರ್ಯಾ ಕಾರ್ಯದರ್ಶಿಯಾಗಿದ್ದಾರೆ. ಬೆಳಗ್ಗೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ.
ಸದ್ಯ ಶಿವಕುಮಾರ್ ಬೆಳಗಾವಿ ಅಧಿವೇಶನದಲ್ಲಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು ದಿನವೂ ನನಗೆ ಕಿರುಕುಳ ನೀಡಲಾಗುತ್ತಿದೆ. ಚುನಾವಣೆ ಹತ್ತಿರವಾಗಿದ್ದರಿಂದ ಇನ್ನಷ್ಟು ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.
ನಾನು ಕಾನೂನಾತ್ಮಕವಾಗಿ ಸರಿಯಾಗಿರುವೆ. ಯಾವುದೇ ತಪ್ಪನ್ನು ಮಾಡಿಲ್ಲ. ಸಿಬಿಐ ಏನು ಮಾಡುತ್ತದೋ ಮಾಡಲಿ. ನಾನು ಮತ್ತು ನನ್ನ ಕುಟುಂಬಸ್ಥರು ವ್ಯವಹಾರಿಕ ಪಾಲುದಾರರು ಸಿಬಿಐಗೆ ಗುರಿಯಾಗಿರುವುದಾಗಿ ಅವರು ತಿಳಿಸಿದ್ದಾರೆ. ನಾನೊಬ್ಬನೇ ಸಂಸ್ಥೆಯನ್ನು ನಡೆಸುತ್ತಿದ್ದೇನೆಯೇ ? ದೇಶದಲ್ಲಿ ಬೇರಾರು ಇಲ್ಲವೇ ? ಸಿಬಿಐ ನನ್ನನ್ನು ಒಳಗೊಂಡಂತೆ ಕುಟುಂಬದ ಎಲ್ಲರಿಗೂ ನೋಟಿಸ್ ನೀಡುತ್ತಿದೆ. ಇದರಿಂದ ಪಕ್ಷ ಸಂಘಟನೆಗೆ ತೊಂದರೆಯಾಗುತ್ತಿದೆ. ಆದರೂ ತನಿಖೆ ಜೊತೆ ಚುನಾವಣೆ ಎದುರಿಸುತ್ತೇನೆ ಎಂದು ತಿಳಿಸಿದ್ದಾರೆ.
YuvaBharataha Latest Kannada News