Breaking News

ಸ್ಪರ್ಧಾತ್ಮಕ ಪರೀಕ್ಷೆಗಳು ಕನ್ನಡದಲ್ಲೇ ನಡೆಯಲಿ : ಬಾಲಚಂದ್ರ ಜಾರಕಿಹೊಳಿ

Spread the love

ಸ್ಪರ್ಧಾತ್ಮಕ ಪರೀಕ್ಷೆಗಳು ಕನ್ನಡದಲ್ಲೇ ನಡೆಯಲಿ : ಬಾಲಚಂದ್ರ ಜಾರಕಿಹೊಳಿ

ಶಿವಾಪುರ(ಹ)-(ತಾ:ಮೂಡಲಗಿ) : ಪಾರಿಜಾತ ಪಿತಾಮಹ ಕುಲಗೋಡ ತಮ್ಮಣ್ಣ ವೇದಿಕೆ : ಕೇಂದ್ರ ಸರ್ಕಾರದ ಅಧೀನದಲ್ಲಿ ನಡೆಯುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಗಳು ಕನ್ನಡದಲ್ಲಿಯೇ ನಡೆಯಬೇಕು. ಇದರಿಂದ ನಮ್ಮ ರಾಜ್ಯದ ಅಭ್ಯರ್ಥಿಗಳಿಗೆ ಉದ್ಯೋಗಗಳು ಸೃಷ್ಟಿಯಾಗಲಿವೆ. ಜೊತೆಗೆ ಕನ್ನಡ ಭಾಷೆಯ ಮಕ್ಕಳಿಗೆ ಹೆಚ್ಚು ಪ್ರಾಶಸ್ತ್ಯ ಸಿಕ್ಕಂತಾಗುತ್ತದೆ ಎಂದು ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಮೂಡಲಗಿ ತಾಲೂಕಿನ ಶಿವಾಪುರ(ಹ) ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರದಂದು ಕನ್ನಡ ಸಾಹಿತ್ಯ ಪರಿಷತ್ತು ಮೂಡಲಗಿ ತಾಲೂಕು ಘಟಕ ಆಯೋಜಿಸಿದ್ದ ಮೂಡಲಗಿ ತಾಲೂಕಾ ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರೀಯ ಪರೀಕ್ಷೆಗಳು ಕನ್ನಡದಲ್ಲಿಯೇ ನಡೆಸುವಂತೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಮೂಲಕ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಮನವಿ ಮಾಡಿಕೊಳ್ಳುವುದಾಗಿ ಅವರು ಹೇಳಿದರು.
ನಮ್ಮ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾರೆ. ಗುಣಮಟ್ಟದ ಶಿಕ್ಷಣವೂ ಸಹ ದೊರೆಯುತ್ತಿದೆ. ಇತ್ತೀಚೆಗೆ ನಮ್ಮ ಕೆಎಂಎಫ್ ಸಂಸ್ಥೆಯಿಂದ ನಡೆಸಿರುವ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಪಡೆದಿದ್ದಾರೆ. ಇದರರ್ಥ ಗ್ರಾಮೀಣ ಭಾಗದಲ್ಲಿಯೂ ವಿದ್ಯಾರ್ಥಿಗಳು ಓದಿನ ಕಡೆಗೆ ಹೆಚ್ಚು ಗಮನ ನೀಡುತ್ತಿರುವುದರಿಂದ ಅವರ ಪ್ರತಿಭೆಗಳು ಬೆಳಕಿಗೆ ಬರುತ್ತಿವೆ. ಕನ್ನಡದಲ್ಲಿಯೇ ಪರೀಕ್ಷೆಗಳು ನಡೆಸಿದರೆ ನಮ್ಮ ರಾಜ್ಯದವರಿಗೆ ಹೆಚ್ಚು ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಮೂಡಲಗಿ ಹೊಸ ತಾಲೂಕು ಕೇಂದ್ರವಾಗಿರುವುದರಿಂದ ತಾಲೂಕು ಮಟ್ಟದ ಕಛೇರಿಗಳು ಈಗಾಗಲೇ ಕರ್ತವ್ಯ ನಿರ್ವಹಿಸುತ್ತಿವೆ. ಈಗಾಗಲೇ ಉಪನೋಂದಣಾಧಿಕಾರಿ ಕಚೇರಿ ಬಂದಿರುವುದರಿಂದ ಇಲ್ಲಿನ ನಿವೇಶನಗಳಿಗೆ ಭಾರೀ ಡಿಮ್ಯಾಂಡ್ ಬಂದಿದೆ. ಪ್ರತಿ ಎಕರೆಗೆ ಕೋಟಿಗಟ್ಟಲೇ ಹಣವನ್ನು ನೀಡಬೇಕಾಗುತ್ತದೆ. ಆದಾಗ್ಯೂ ಸಾಹಿತ್ಯ ಪರಿಷತ್ತಿನ ಮನವಿಯ ಮೇರೆಗೆ ಸಾಹಿತ್ಯ ಆಸಕ್ತರಿಗೆ ಅನುಕೂಲವಾಗಲು ಮೂಡಲಗಿಯಲ್ಲಿ ಸಾಹಿತ್ಯ ಭವನವನ್ನು ನಿರ್ಮಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದು ಭರವಸೆ ನೀಡಿದರು.

ಒಗ್ಗಟ್ಟಿನಿಂದ ಸಂಘಟಿತರಾದರೇ ಎಂತಹ ಬೇಕಾದ ಸಾಧನೆಯನ್ನು ಮಾಡಬಹುದು. ಇದಕ್ಕೆ ಸಾಕ್ಷಿ ಎಂಬಂತೆ ಶಿವಾಪೂರ(ಹ) ಗ್ರಾಮದಲ್ಲಿಂದು ನಡೆಯುತ್ತಿರುವ ಸಾಹಿತ್ಯ ಸಮ್ಮೇಳನ ಜಿಲ್ಲಾ ಸಮ್ಮೇಳನದಂತೆ ಅಚ್ಚುಕಟ್ಟಾಗಿ ನಡೆಯುತ್ತಿದೆ. ಗ್ರಾಮದ ಮುಖಂಡರು ಒಗ್ಗಟ್ಟಿನಿಂದ ಸಾಹಿತ್ಯ ಸಮ್ಮೇಳನವನ್ನು ಕನ್ನಡ ಜಾತ್ರೆಯನ್ನಾಗಿ ಪರಿವರ್ತಿಸಿದ್ದಾರೆ. ಅದಕ್ಕಾಗಿ ಸಮಸ್ತ ಗ್ರಾಮಸ್ಥರನ್ನು ಹಾಗೂ ಕನ್ನಡಾಭಿಮಾನಿಗಳನ್ನು ಮನಃಪೂರ್ವಕವಾಗಿ ಅಭಿನಂದಿಸುತ್ತೇನೆ ಎಂದು ತಿಳಿಸಿದರು.
ರಾಜ್ಯದಲ್ಲಿ ಕನ್ನಡ ಭಾಷೆ ಗಟ್ಟಿಯಾಗಿ ನಿಲ್ಲಬೇಕು. ಇದಕ್ಕೆ ಬೇಕಾದ ಎಲ್ಲ ರೀತಿಯ ಸಹಕಾರ ನೀಡಲು ಸಿದ್ಧರಿದ್ದೇವೆ. ಕನ್ನಡದ ಕೆಲಸಗಳಿಗೆ ಯಾವತ್ತೂ ಕಂಕಣಬದ್ಧರಾಗಿ ನಿಲ್ಲುತ್ತೇವೆ. ನಾಡು-ನುಡಿ, ನೆಲ-ಜಲ ವಿಷಯಗಳು ಬಂದಾಗ ಎಲ್ಲರೂ ಸಂಘಟಿತರಾಗಿ ಹೋರಾಡೋಣ. ನಮ್ಮ ಕನ್ನಡಾಂಬೆಗೆ ಗೌರವ ಸಲ್ಲಿಸೋಣ. ಕನ್ನಡಕ್ಕಾಗಿ ಎಂತಹ ಕೆಲಸಕ್ಕೂ ನಾವು ಬದ್ಧರಿದ್ದೇವೆ ಎಂದು ಹೇಳಿದರು.
ಮೂಡಲಗಿ ತಾಲೂಕು ಭೌಗೋಳಿಕ, ಐತಿಹಾಸಿಕ ಹಾಗೂ ಸಾಂಸ್ಕೃತಿಕವಾಗಿ ವೈಶಿಷ್ಟ್ಯ ಪೂರ್ಣ ವಾಗಿದ್ದು ಅತ್ಯಂತ ಶ್ರೀಮಂತಿಕೆಯಿಂದ ಕೂಡಿದೆ. ಶಿಕ್ಷಣ, ಕೃಷಿ, ಸಹಕಾರ, ಸಾಹಿತ್ಯ, ಕಲಾ ಕ್ಷೇತ್ರಗಳಲ್ಲಿ ಸಾಕಷ್ಟು ಪ್ರಗತಿಯನ್ನು ಹೊಂದಿದ್ದು, ಮುಂದಿನ ದಿನಗಳಲ್ಲಿ ಇವೆಲ್ಲಕ್ಕೂ ನನ್ನ ಸಂಪೂರ್ಣ ಸಹಕಾರ ಹಾಗೂ ಪ್ರೋತ್ಸಾಹ ನಿರಂತರವಾಗಿ ನೀಡುತ್ತೇನೆ. ಜಾನಪದ ಕಲೆಗಳು ಆಧುನಿಕ ಭರಾಟೆಯಲ್ಲಿ ನಶಿಸಿ ಹೋಗುತ್ತಲಿದ್ದು, ಅವುಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದೆ. ಮೂಡಲಗಿ ಮತ್ತು ಗೋಕಾಕ ತಾಲೂಕಿನಲ್ಲಿ ಹಲವಾರು ಜಾನಪದ ಕಲೆಗಳು, ಕಲಾವಿದರಿದ್ದು, ಕಲೆಗಳನ್ನು ಸಂರಕ್ಷಿಸುವುದು ಮತ್ತು ಕಲಾವಿಧರನ್ನು ಪ್ರೋತ್ಸಾಹಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು.
2018 ರಲ್ಲಿ ಪ್ರತ್ಯೇಕವಾಗಿ ಅಸ್ಥಿತ್ವಕ್ಕೆ ಬಂದಿರುವ ಮೂಡಲಗಿ ತಾಲೂಕಿನಲ್ಲಿ ಕಲೆ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳು ನಿರಂತರವಾಗಿ ನಡೆಯಬೇಕು. ತಾಲೂಕಿನ ಸಾಹಿತಿಗಳು, ಬರಹಗಾರರು, ಗುಣಮಟ್ಟದ ಸಾಹಿತ್ಯವನ್ನು ರಚಿಸುವ ಮೂಲಕ ಮೂಡಣ ನಾಡನ್ನು ದಶ ದಿಕ್ಕುಗಳಲ್ಲಿ ಬೆಳೆಯುವಂತೆ ಮಾಡುವಂತಾಗಬೇಕು ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿದರು.
93 ರ ವಯಸ್ಸಿನ ಹಿರಿಯ ಸಾಹಿತಿ ರೇ. ಭಾಸ್ಕರ ಸಣ್ಣಕ್ಕಿ ಅವರನ್ನು ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಮಾಡಿರುವುದು ಸಮ್ಮೇಳನಕ್ಕೆ ಕಳೆ ಬಂದಿದೆ. ದಲಿತ ವ್ಯಕ್ತಿಗೆ ದೊಡ್ಡ ಗೌರವ ನೀಡಿರುವ ಕಸಾಪವನ್ನು ಅಭಿನಂದಿಸಿದ ಅವರು, ಸಣ್ಣಕ್ಕಿ ಅವರ ಜೀವನ ಸುಖದಿಂದ ಕೂಡಿರಲಿ ಎಂದು ಆಶಿಸಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಮೂಡಲಗಿ ಶಿವಬೋಧರಂಗ ಮಠದ ಶ್ರೀಧರಬೋಧ ಸ್ವಾಮಿಗಳು ಮತ್ತು ಸುಣಧೋಳಿ ಶಿವಾನಂದ ಮಹಾಸ್ವಾಮಿಗಳು ವಹಿಸಿದ್ದರು.
ಅಧ್ಯಕ್ಷತೆಯನ್ನು ಗ್ರಾಮದ ಗಣ್ಯ ನಾಗರಿಕ ಮಲ್ಲನಗೌಡ ಶಂಕರಗೌಡ ಪಾಟೀಲ ವಹಿಸಿದ್ದರು.
ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ಹಿರಿಯ ಸಾಹಿತಿ ರೇ.ಭಾಸ್ಕರ ಸಣ್ಣಕ್ಕಿ ಅವರು ವಹಿಸಿದ್ದರು. ಸಾಹಿತ್ಯ ಸಮ್ಮೇಳನದ ಪರವಾಗಿ ಅವರನ್ನು ಶಾಸಕರು ಸತ್ಕರಿಸಿದರು.

ಘಟಪ್ರಭಾ ಜೆಜಿ ಕೋ ಆಸ್ಪತ್ರೆಯ ಅಧ್ಯಕ್ಷ ಬಿ.ಆರ್. ಪಾಟೀಲ (ನಾಗನೂರ), ಜಿಪಂ ಮಾಜಿ ಅಧ್ಯಕ್ಷ ಬಸಗೌಡ ಪಾಟೀಲ(ಕಲ್ಲೋಳಿ), ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುಭಾಸ ಢವಳೇಶ್ವರ, ಗ್ರಾಪಂ ಅಧ್ಯಕ್ಷ ಬಸವರಾಜ ಸಾಯನ್ನವರ, ಶಿವನಗೌಡ ಪಾಟೀಲ, ಈಶ್ವರ ಬೆಳಗಲಿ, ಕೆಂಪಣ್ಣಾ ಮುಧೋಳ, ಶಿವಬಸು ಜುಂಜರವಾಡ, ಕಾಡಪ್ಪ ರೊಡ್ಡನ್ನವರ, ಶಿವನಪ್ಪ ರಡರಟ್ಟಿ, ಸತೀಶ ಜುಂಜರವಾಡ, ಈರಯ್ಯಾ ಹಿರೇಮಠ, ಬಸಪ್ಪ ಮುಗಳಖೋಡ, ಬಸವರಾಜ ತೇಲಿ, ಹನಮಂತ ತೇರದಾಳ, ಶಂಕರಗೌಡ ದುಂ. ಪಾಟೀಲ, ಅಜ್ಜಪ್ಪ ಗಿರಡ್ಡಿ, ಆನಂದರಾವ್ ನಾಯ್ಕ, ನಿವೃತ್ತ ಪ್ರಾಧ್ಯಾಪಕ ಪ್ರೊ. ಚಂದ್ರಶೇಖರ ಅಕ್ಕಿ, ಗೋಕಾಕ ತಾಲೂಕಾ ಕಸಾಪ ಅಧ್ಯಕ್ಷೆ ಭಾರತಿ ಮದಬಾವಿ, ಬಾಳಪ್ಪ ಬೆಳಕೂಡ, ಎಂ.ಎಂ. ಪಾಟೀಲ, ಹನಮಂತ ಗುಡ್ಲಮನಿ, ಸಂತೋಷ ಸೋನವಾಲಕರ, ತಹಶೀಲ್ದಾರ ಡಿ.ಜಿ. ಮಹಾತ್, ತಾಪಂ ಇಓ ಎಫ್.ಜಿ. ಚಿನ್ನನ್ನವರ, ಬಿಇಓ ಅಜೀತ ಮನ್ನಿಕೇರಿ, ಸಿಪಿಐ ಶ್ರೀಶೈಲ ಬ್ಯಾಕೋಡ, ಸಿಡಿಪಿಓ ವೈ.ಕೆ. ಗದಾಡಿ, ಡಾ.ಭಾರತಿ ಕೋಣಿ, ಬಾಲಶೇಖರ ಬಂದಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಜಿಲ್ಲಾ ಕಸಾಪ ಅಧ್ಯಕ್ಷೆ ಮಂಗಲಾ ಮೆಟಗುಡ್ಡ ಮಾತನಾಡಿ, ಶಿವಾಪುರ(ಹ) ಗ್ರಾಮದಲ್ಲಿ ನಡೆಯುತ್ತಿರುವ ಸಮ್ಮೇಳನ ಐತಿಹಾಸಿಕವಾಗಿದೆ. ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಪ್ರಯತ್ನದಿಂದಾಗಿ ಗೋಕಾಕ ಮತ್ತು ಮೂಡಲಗಿ ತಾಲೂಕುಗಳಲ್ಲಿ ನಿರಂತರವಾಗಿ ಕನ್ನಡದ ಕೆಲಸಗಳು ಅಚ್ಚುಕಟ್ಟಾಗಿ ನಡೆಯುತ್ತಿವೆ. ಅದಕ್ಕಾಗಿ ಬಾಲಚಂದ್ರ ಜಾರಕಿಹೊಳಿ ಅವರನ್ನು ಅಭಿನಂದಿಸುತ್ತೇನೆ ಎಂದು ತಿಳಿಸಿದರು.
ತಾಲೂಕು ಕಸಾಪ ಅಧ್ಯಕ್ಷ ಡಾ.ಸಂಜಯ ಶಿಂಧಿಹಟ್ಟಿ ಅವರು ಪರಿಷತ್ತಿನ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದರು. ನಿಕಟಪೂರ್ವ ಸರ್ವಾಧ್ಯಕ್ಷ ಪ್ರೊ.ಸಂಗಮೇಶ ಗುಜಗೊಂಡ ಅವರು ಸಮ್ಮೇಳನದ ಸರ್ವಾಧ್ಯಕ್ಷ ಭಾಸ್ಕರ ಸಣ್ಣಕ್ಕಿ ಅವರಿಗೆ ಧ್ವಜ ಹಸ್ತಾಂತರಿಸಿದರು.
ಭುವನೇಶ್ವರಿ ಪೂಜೆ ಹಾಗೂ ಅದ್ಧೂರಿ ಮೆರವಣಿಗೆಯು ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆಯಿತು. ಶಿವಾಪುರ(ಹ) ಗ್ರಾಮವು ನವ ವಧುವಿನಂತೆ ಶೃಂಗಾರಗೊಂಡಿತ್ತು. ಎಲ್ಲಿ ನೋಡಿದಲ್ಲಿ ಕನ್ನಡದ ಬಾವುಟಗಳು ಹಾರಾಡುತ್ತಿದ್ದವು.


Spread the love

About Yuva Bharatha

Check Also

ಹಿರೇಬೂದನೂರ : ಭಕ್ತರ ಸನ್ಮಾನ

Spread the loveಹಿರೇಬೂದನೂರ : ಭಕ್ತರ ಸನ್ಮಾನ ಮುರಗೋಡ : ಹಿರೇಬೂದನೂರ ಗ್ರಾಮದ ಶ್ರೀ ಸದ್ಗುರು ಸಂತ ಬಾಳುಮಾಮಾ ದೇವಸ್ಥಾನದ …

Leave a Reply

Your email address will not be published. Required fields are marked *

5 × 2 =