Breaking News

ನಾನೆಂದು ಬಿಜೆಪಿ ತೊರೆಯಲಾರೆ : ಕಿರಣ ಜಾಧವ ಸ್ಪಷ್ಟ ನುಡಿ

Spread the love

ನಾನೆಂದು ಬಿಜೆಪಿ ತೊರೆಯಲಾರೆ : ಕಿರಣ ಜಾಧವ ಸ್ಪಷ್ಟ ನುಡಿ

ಯುವ ಭಾರತ ಸುದ್ದಿ ಬೆಳಗಾವಿ :
ವಿಧಾನಸಭಾ ಚುನಾವಣೆ ಸಂಬಂಧ ಬಿಜೆಪಿ ಈಗಾಗಲೇ ತನ್ನ ಪಟ್ಟಿ ಬಿಡುಗಡೆ ಮಾಡಿದೆ. ಆ ಬಗ್ಗೆ ಯಾವುದೇ ತಕರಾರು ಇಲ್ಲ. ಪಕ್ಷ ಅಭ್ಯರ್ಥಿಗಳ ಬಗ್ಗೆ ಸಾಕಷ್ಟು ಸರ್ವೆ ನಡೆಸಿಯೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ನನಗೆ ಈ ಸಲ ಟಿಕೆಟ್ ತಪ್ಪಿದರೂ ಬಿಜೆಪಿ ತೊರೆಯುವ ಪ್ರಶ್ನೆ ಇಲ್ಲ ಎಂದು ಬೆಳಗಾವಿ ದಕ್ಷಿಣ ವಿಧಾನಸಭಾ ಮತಕ್ಷೇತ್ರದಿಂದ ಆಕಾಂಕ್ಷಿಯಾಗಿದ್ದ ಕಿರಣ ಜಾಧವ ಸ್ಪಷ್ಟಪಡಿಸಿದ್ದಾರೆ.

ಬೆಳಗಾವಿಯಲ್ಲಿ ಶುಕ್ರವಾರ ಅಂಬೇಡ್ಕರ್ ಜಯಂತಿ ನಂತರ ತಮ್ಮನ್ನು ಭೇಟಿಯಾದ ಪತ್ರಕರ್ತರ ಜೊತೆ ಮಾತನಾಡಿದ ಅವರು,
ಬಿಜೆಪಿಯ ತತ್ವ ಸಿದ್ಧಾಂತಗಳು ಬೇರೆಯೇ ಆಗಿವೆ. ಯಾರೇ ಆಗಿರಲಿ. ಬಿಜೆಪಿಗೆ ಬರಬೇಕಾಗಿದ್ದರೆ ಮೊದಲು ಪಕ್ಷವನ್ನು ಅರಿತುಕೊಳ್ಳಬೇಕು. ಪಕ್ಷ ನೀಡಬೇಕಾದ ಸ್ಥಾನಮಾನವನ್ನು ಕೊಟ್ಟೆ ಕೊಡುತ್ತದೆ. ಆದರೆ, ಯಾವುದೇ ಸ್ಥಾನಮಾನ ಕೊಟ್ಟಿಲ್ಲ ಎಂದು ಪಕ್ಷವನ್ನು ಬೇಕಾದ ರೀತಿಯಲ್ಲಿ ವಾಚಮಗೋಚರವಾಗಿ ಬೈಯಲು ಹೋಗಬಾರದು. ಪಕ್ಷ
ತಮ್ಮನ್ನು ಶಾಸಕರು, ಸಚಿವರನ್ನಾಗಿ ಮಾಡಿದ ನಂತರ ಸರ್ವೆಯಲ್ಲಿ ಹೆಸರು ಬಾರದೇ ಇರಬಹುದು. ಆದರೆ ಆಗ ಪಕ್ಷವನ್ನು ಬಯ್ಯಲು ಹೋಗುವುದು ಸರಿಯಲ್ಲ. ನಾನು ಕಳೆದ 20 ವರ್ಷಗಳಿಂದ ಬಿಜೆಪಿಯಲ್ಲಿ ಸಕ್ರಿಯ ಕಾರ್ಯಕರ್ತನಾಗಿ ದುಡಿಯುತ್ತಿದ್ದೇನೆ. ಈ ಸಲ ಟಿಕೆಟ್ ಆಕಾಂಕ್ಷಿಯಾಗಿದ್ದೆ. ಆದರೆ ಅವಕಾಶ ಸಿಕ್ಕಿಲ್ಲ. ಭವಿಷ್ಯದಲ್ಲಿ ಪಕ್ಷ ಸ್ಥಾನಮಾನ ನೀಡಬಹುದು ಎಂಬ ಆಶಾಭಾವ ಹೊಂದಿದ್ದೇನೆ. ಅದನ್ನು ಬಿಟ್ಟು ನನಗೆ ಟಿಕೆಟ್ ಸಿಕ್ಕಿಲ್ಲ ಎಂಬ ಒಂದೇ ಕಾರಣಕ್ಕೆ ನಾನು ಬಿಜೆಪಿಯನ್ನು ಯಾವುದೇ ಕಾರಣಕ್ಕೂ ಬಯ್ಯುವುದಿಲ್ಲ. ನಾನು ಎಂದಿಗೂ ಬಿಜೆಪಿಯನ್ನು ತೊರೆದು ಇನ್ನೊಂದು ಪಕ್ಷಕ್ಕೆ ಹೋಗುವ ಪ್ರಶ್ನೆಯು ಎದುರಾಗದು ಎಂದು ಅವರು ಸ್ಪಷ್ಟಪಡಿಸಿದರು.

ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ನಾನು ಶಕ್ತಿಮೀರಿ ಶ್ರಮಿಸುತ್ತೇನೆ. ನಾನು ಮೊದಲಿನಿಂದಲೂ ಪಕ್ಷ ಕಟ್ಟಿ ಬೆಳೆಸಿದ್ದು ಮುಂದಿನ ದಿನಗಳಲ್ಲಿ ಪಕ್ಷದ ಸಂಘಟನೆಗೆ ಹಗಲು- ರಾತ್ರಿ ಶ್ರಮಿಸುವೆ. ಪಕ್ಷವನ್ನು ಬಲಾಢ್ಯವಾಗಿ ಕಟ್ಟುವೆ. ಬೆಳಗಾವಿ ಗ್ರಾಮೀಣದಲ್ಲಿ ಈ ಬಾರಿ ಬಿಜೆಪಿಗೆ ಅತ್ಯುತ್ತಮ ವಾತಾವರಣವಿದೆ. ಅಲ್ಲಿ ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

ಪಕ್ಷ ಟಿಕೆಟ್ ಕೊಟ್ಟಿಲ್ಲ ಎಂದು ಪಕ್ಷದ ವಿರುದ್ಧ ಬಂಡಾಯ ಹೇಳುವುದು ಸರಿಯಲ್ಲ.
ಬಂಡಾಯ ಎನ್ನುವುದು ಕೇವಲ ತಾತ್ಕಾಲಿಕ. ಒಂದೆರಡು ದಿನಗಳ ಕಾಲ ಅದು ಇರುತ್ತದೆ. ನಂತರ ಎಲ್ಲವೂ ತಿಳಿಯಾಗುತ್ತದೆ. ಎಲ್ಲಾ ಕಾರ್ಯಕರ್ತರು ಮುಂದಿನ ದಿನಗಳಲ್ಲಿ ಒಟ್ಟಾರೆ ಬಿಜೆಪಿಯನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಶ್ರಮಿಸಲಿದ್ದಾರೆ. ಬಿಜೆಪಿ ಬಹುದೊಡ್ಡ ಸಂಘಟನೆಯನ್ನು ಹೊಂದಿದ ಪಕ್ಷವಾಗಿದೆ. ಬೂತ್ ಮಟ್ಟದಿಂದ ಹಿಡಿದು ರಾಷ್ಟ್ರ ಮಟ್ಟದವರೆಗೆ ಬಲಯುತವಾಗಿದೆ. ರಾಜ್ಯದಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಯಾವುದೇ ಅನುಮಾನವಿಲ್ಲ
ಎಂದು ಅವರು ತಿಳಿಸಿದರು.

ಬಿಜೆಪಿ ಟಿಕೆಟ್ ವಂಚಿತರಾದ ನಿಮಗೆ ಕಾಂಗ್ರೆಸ್ ಪಕ್ಷದಿಂದ ಕರೆ ಬಂದಿದೆಯಾ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರ ನೀಡಿದ ಕಿರಣ ಜಾಧವ, ಕಾಂಗ್ರೆಸ್ ಸೇರಿದಂತೆ ವಿವಿಧ ಪಕ್ಷಗಳಿಂದ ಆ ಪಕ್ಷ ಸೇರುವಂತೆ ಅಹ್ವಾನ ಬರುತ್ತದೆ ನಿಜ. ಆದರೆ, ಆ ಪಕ್ಷಗಳ ನಾಯಕರಿಗೆ ನಾನು ಯಾವುದೇ ಕಾರಣಕ್ಕೂ ಬಿಜೆಪಿ ತೊರೆದು ಅವರ ಪಕ್ಷ ಸೇರುವುದಿಲ್ಲ ಎನ್ನುವುದು ಚೆನ್ನಾಗಿ ಗೊತ್ತಿದೆ. ಯಾಕೆಂದರೆ ನಾನು ಮೊದಲಿನಿಂದಲೂ ಬಿಜೆಪಿಯ ಸಕ್ರಿಯ ಕಾರ್ಯಕರ್ತನಾಗಿರುವೆ. ನಾನು ಯಾವ ಕಾಲಕ್ಕೂ ಅವರ ಪಕ್ಷಕ್ಕೆ ಬರುವುದಿಲ್ಲ ಎಂಬ ಸತ್ಯ ಆ ಪಕ್ಷದ ನಾಯಕರಿಗೆ ಗೊತ್ತಿದೆ. ಅದಕ್ಕಾಗಿ ಯಾವ ನಾಯಕರು ಸಹ ನನ್ನನ್ನು ಸೇರ್ಪಡೆ ಮಾಡಿಕೊಳ್ಳಲು ಆಸಕ್ತಿ ತೋರುವುದಿಲ್ಲ. ಬಿಜೆಪಿಯೇ ನನ್ನ ಉಸಿರಾಗಿದೆ. ಪಕ್ಷ ಯಾವುದೇ ಸ್ಥಾನಮಾನ ಕೊಡಲಿ, ಕೊಡದೆ ಇರಲಿ. ಜೀವನದ ಕೊನೆಯ ಕ್ಷಣದವರೆಗೂ ಬಿಜೆಪಿಯಲ್ಲಿ ಇರುತ್ತೇನೆ ಎಂದು ಅವರು ಹೇಳಿದರು.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

one − 1 =