Breaking News

ಕರುನಾಡು ಗೆಲ್ಲಲು ಸ್ವತಃ ಮೋದಿಯೇ ವಾಸ್ತವ್ಯ !

Spread the love

ಕರುನಾಡು ಗೆಲ್ಲಲು ಸ್ವತಃ ಮೋದಿಯೇ ವಾಸ್ತವ್ಯ !

ಯುವ ಭಾರತ ಸುದ್ದಿ ದೆಹಲಿ : ಕರ್ನಾಟಕ ವಿಧಾನಸಭಾ ಚುನಾವಣೆಯನ್ನು ಗೆದ್ದೇ ಗೆಲ್ಲಬೇಕು ಎಂಬ ಛಲ ತೊಟ್ಟಿರುವ ಬಿಜೆಪಿ ತನ್ನ ವರ್ಚಸ್ವಿ ನಾಯಕ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೊನೆಯ ಅಸ್ತ್ರವಾಗಿ ಕರೆತರಲು ಮುಂದಾಗಿದೆ.

ನರೇಂದ್ರ ಮೋದಿ ಅವರು ಕರ್ನಾಟಕದಲ್ಲಿ 20 ಕ್ಕೂ ಹೆಚ್ಚು ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ. ಬಿಜೆಪಿಯ ಚುನಾವಣಾ ಅಖಾಡದಲ್ಲಿ ನಂಬರ್ ಒನ್ ಸ್ಟಾರ್ ಪ್ರಚಾರಕರಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸನ್ನು ವ್ಯಾಪಕ ಪ್ರಮಾಣದಲ್ಲಿ ಬಳಸಿಕೊಳ್ಳಲು ಬಿಜೆಪಿ ಮುಂದಾಗಿದೆ. ಮೇ 10 ರಂದು ಕರ್ನಾಟಕ ವಿಧಾನಸಭೆಯ ಅತ್ಯಂತ ಮಹತ್ವದ ಚುನಾವಣೆ ಒಂದೇ ಹಂತದಲ್ಲಿ ನಡೆಯಲಿದೆ. ಈ ಕಾರಣಕ್ಕೆ ಮೇ 6 ರಿಂದ 8 ರವರೆಗೆ ಪ್ರಧಾನಿಯವರು ಕರ್ನಾಟಕ ರಾಜ್ಯದಲ್ಲಿ ಮೊಕ್ಕಾಂ ಹೂಡಿ ಭಾರೀ ಪ್ರಚಾರ ನಡೆಸುವ ಸಾಧ್ಯತೆಗಳು ಗೋಚರವಾಗಿವೆ. ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ ಆಡಳಿತರೂಢ ಬಿಜೆಪಿ ಕರ್ನಾಟಕ ಚುನಾವಣೆಯಲ್ಲಿ ತೀವ್ರ ಹಿನ್ನಡೆ ಅನುಭವಿಸುವ ಸಾಧ್ಯತೆ ಇದೆ. ಜೊತೆಗೆ ಅಧಿಕಾರ ಕಳೆದುಕೊಳ್ಳುವ ಸಾಧ್ಯತೆ ಯನ್ನು ಅನೇಕ ಸಮೀಕ್ಷೆಗಳು ನುಡಿದಿವೆ.

ಮೋದಿ ಅವರು ಮಾಡಲಿರುವ ಮ್ಯಾಜಿಕ್ ನಿಂದ ಮಾತ್ರ ಕರ್ನಾಟಕವನ್ನು ಬಿಜೆಪಿ ಹಿಡಿತಕ್ಕೆ ಮತ್ತೆ ತರಲು ಸಾಧ್ಯ ಎಂದು ಒಟ್ಟಾರೆ ಕಮಲ ಪಕ್ಷ ಬಲವಾಗಿ ನಂಬಿದೆ. ರಾಜ್ಯದ ವಿವಿಧಡೆ ಪ್ರಧಾನಿಯವರ ಹತ್ತು ಹಲವು ಸಮಾವೇಶಗಳನ್ನು ನಡೆಸಲು ಪಕ್ಷ ಸಿದ್ಧತೆ ನಡೆಸಿದೆ. ಹೈದರಾಬಾದ್ ಕರ್ನಾಟಕ ಭಾಗದಲ್ಲಿ 40 ವಿಧಾನಸಭಾ ಮತಕ್ಷೇತ್ರಗಳಿದ್ದು ಆ ಭಾಗದಲ್ಲಿ ಪ್ರಧಾನಿಯವರು ಹೆಚ್ಚು ಹೆಚ್ಚು ಸಮಾವೇಶ ನಡೆಸುವ ಸಾಧ್ಯತೆ ಬಹುತೇಕ ಕಂಡು ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದಲ್ಲಿ ಈಗಾಗಲೇ ಏಳು ಸಮಾವೇಶಗಳನ್ನು ನಡೆಸಿದ್ದಾರೆ. ಬೆಳಗಾವಿ, ಹುಬ್ಬಳ್ಳಿ, ಮಂಡ್ಯ, ದಾವಣಗೆರೆ ಮುಂತಾದ ಕಡೆಗಳಲ್ಲಿ ಸಮಾವೇಶ ನಡೆಸಿದ್ದಾರೆ. ಆದರೆ ಚುನಾವಣೆ ಹತ್ತಿರವಾದಂತೆ ರಾಜ್ಯಕ್ಕೆ ಮೋದಿಯವರನ್ನು ಕರೆತಂದು ಭರ್ಜರಿ ಪ್ರಚಾರ ನಡೆಸುವ ಮೂಲಕ ಕಳೆಗುಂದಿರುವ ಬಿಜೆಪಿಗೆ ಚೈತನ್ಯ ನೀಡಲು ಮುಂದಾಗಿರುವುದು ಎದ್ದುಕೊಂಡಿದೆ. ಆಡಳಿತರೂಢ ಬಸವರಾಜ ಬೊಮ್ಮಾಯಿ ಸರಕಾರದ ಹಲವರ ವಿರುದ್ಧ ಭ್ರಷ್ಟಾಚಾರದ ಆರೋಪ ದೊಡ್ಡ ಪ್ರಮಾಣದಲ್ಲಿ ಕೇಳಿ ಬಂದಿದೆ. ಸದ್ಯದ ಪರಿಸ್ಥಿತಿಯಲ್ಲಿ ಆಡಳಿತ ವಿರೋಧಿ ಅಲೆ ಬಹುದೊಡ್ಡ ಮಟ್ಟದಲ್ಲಿ ಕೇಳಿ ಬರುತ್ತಿದ್ದು ಇದನ್ನು ತೆರೆಯ ಮರೆಗೆ ಸರಿಸಲು ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಛ ಆಡಳಿತದ ಕಲ್ಪನೆ ಅಗತ್ಯ. ಈ ನಿಟ್ಟಿನಲ್ಲಿ ಪ್ರಧಾನಿ ಅವರನ್ನು ಕರೆತಂದು ಬಿಜೆಪಿಯ ಅಭಿವೃದ್ಧಿ ಕಾರ್ಯಗಳನ್ನು ಪ್ರಸ್ತಾಪಿಸಿ ಸಮಾವೇಶ ನಡೆಸುವುದು ಬಿಜೆಪಿಯ ಪಡಸಾಲೆಯಲ್ಲಿ ಚರ್ಚಿತವಾಗಿದೆ.

ಒಟ್ಟಾರೆ, ಮೋದಿ ಅವರು ಕರ್ನಾಟಕಕ್ಕೆ ಮೇಲಿಂದ ಮೇಲೆ ಆಗಮಿಸಿ ಭರ್ಜರಿ ಪ್ರಚಾರ ನಡೆಸುವ ಸಾಧ್ಯತೆ ಕಂಡು ಬಂದಿದ್ದು ಮೋದಿ ಅವರ ಅಭಿಮಾನಿಗಳಿಗೆ ಸಂತಸ ಸುದ್ದಿಯಾಗಿದೆ.

ಆಡಳಿತ ವಿರೋಧಿ ಅಲೆಯನ್ನು ಹಿಮ್ಮೆಟ್ಟಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ಮಾತ್ರ ಸಾಧ್ಯವಿದೆ ಎಂದು ನಂಬಿರುವ ಬಿಜೆಪಿ ಪಾಲಿಗೆ ಇದೀಗ ಮೋದಿ ಒಬ್ಬರೇ ಆಶಾಕಿರಣದಂತೆ ಗೋಚರವಾಗಿದ್ದಾರೆ. ಮೋದಿ ಭಾಷಣ ಕೇಳಲು ಕರುನಾಡಿನ ಬಿಜೆಪಿ ಕಾರ್ಯಕರ್ತರು ತುದಿಗಾಲಲ್ಲಿ ನಿಂತಿದ್ದಾರೆ.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

2 × four =