Breaking News

ಸಿದ್ದೇಶ್ವರ ಶ್ರೀಗಳು ಕೃಷಿ, ಋಷಿ ಪರಂಪರೆಯ ದೊಡ್ಡ ಸಂತರು

Spread the love

ಸಿದ್ದೇಶ್ವರ ಶ್ರೀಗಳು ಕೃಷಿ, ಋಷಿ ಪರಂಪರೆಯ ದೊಡ್ಡ ಸಂತರು

ಯುವ ಭಾರತ ಸುದ್ದಿ ಬಸವನಬಾಗೇವಾಡಿ: ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳು ಈ ದೇಶದ ಕೃಷಿ, ಋಷಿ ಪರಂಪರೆಯ ದೊಡ್ಡ ಸಂತರು. ದೇಶದ ಸಾಂಸ್ಕೃತಿಕ, ಧಾರ್ಮಿಕ ಮಹತ್ವವನ್ನು ತಿಳಿಸಿಕೊಟ್ಟಿದ್ದಾರೆ. ಜಗತ್ತಿನ ಕತ್ತಲೆ ಕಳೆಯುವ ಜ್ಞಾನಮೃತ ಕೊಟ್ಟುಹೋಗಿದ್ದಾರೆ ಎಂದು ಬೈಲೂರಿನ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ಮೇಗಾ ಮಾರ್ಕೆಟ್ ಆವರಣದಲ್ಲಿ ಭಾನುವಾರ ಸಂಜೆ ಹಮ್ಮಿಕೊಂಡಿದ್ದ ಶತಮಾನದ ಸಂತ ಜ್ಞಾನ ಯೋಗಿ ಸಿದ್ದೇಶ್ವರ ಮಹಾಸ್ವಾಮೀಜಿ ಅವರ ನೆನಹು ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಸಿದ್ಧೇಶ್ವರ ಶ್ರೀಗಳು ವೇದ, ಉಪನಿಷತ್, ರಾಮಾಯಣ, ಮಹಾಭಾರತ, ಮಹಾನ್ ತತ್ವಜ್ಞಾನಿಗಳ ಸೇರಿದಂತೆ ವಿವಿಧ ಧರ್ಮ ಗ್ರಂಥಗಳನ್ನು ಆಳವಾಗಿ ಅಧ್ಯಯನ ಮಾಡಿದ್ದರು. ವಚನ ಸಾಹಿತ್ಯ ಮಾತ್ರ ಅವರ ಬದುಕಿಗೆ ಪಠ್ಯಪುಸ್ತಕದಂತಿತ್ತು. ಬಸವ ಧರ್ಮ ಪುನರುತ್ಥಾನ ಮಾಡುವ ಕೈಂಕರ್ಯ ಅವರದಾಗಿತ್ತು. ಅವರು ಹೇಳಿದ ಶಬ್ದಗಳಿಂದಲೇ ಜಗತ್ತನ್ನು ಕಟ್ಟಬಹುದು, ಅವರನ್ನು ನೋಡಿ ಜೀವನ ಅನುಭವಿಸಬೇಕು. ಅವರ ಕುರಿತಾಗಿ ಚಿಂತನಗೋಷ್ಠಿಗಳು ನಿರಂತರವಾಗಿ ನಡೆಯಬೇಕು ಎಂದು ಹೇಳಿದರು. .
ಬೀಳೂರಿನ ಮುರಘೇಂದ್ರ ಸ್ವಾಮೀಜಿ‌ ಮಾತನಾಡಿ, ಮಾತೆಂಬುದು ಜ್ಯೋತಿರ್ಲಿಂಗ ಎಂಬಂತೆ ಸಿದ್ಧೇಶ್ವರ ಸ್ವಾಮೀಜಿ ಅವರು ತಮ್ಮ ಮಾತುಗಳಿಂದಲೇ ಜನರ ಮನಸ್ಸಿನಲ್ಲಿ ಶಾಸ್ವತವಾಗಿ ಉಳಿದುಕೊಂಡಿದ್ದಾರೆ. ಅವರು ಸಮಯಕ್ಕೆ ಮಹತ್ವ ಕೊಡುತ್ತಿದ್ದರು. ಎಲ್ಲರೂ ನಮ್ಮವರೆಂದು ಆತ್ಮಿಯವಾಗಿ ನೋಡಿಕೊಳ್ಳುತ್ತಿದ್ದರು. ಮನಸ್ಸು ಹೂವಿನಷ್ಟೇ ಮೃದುವಾಗಿತ್ತು. ಮಹಾತ್ಮರನ್ನು ನೆನೆಪಿಸುವುದೇ ಮಹಾನ್ ಕಾರ್ಯ ಎಂದು ಹೇಳಿದರು.
ಶಾಸಕ ಶಿವಾನಂದ ಪಾಟೀಲ ಮಾತನಾಡಿ, ಪಟ್ಟಣದಲ್ಲಿ ನಿರ್ಮಾಣಗೊಂಡಿರುವ ಮೆಗಾ ಮಾರ್ಕೆಟ್, ಬಸವ ಭವನ ಸಿದ್ಧೇಶ್ವರ ಶ್ರೀಗಳೇ ಉದ್ಘಾಟಿಸುತ್ತಾರೆ ಎಂಬ ನಿರೀಕ್ಷೆ ಇತ್ತು. ಅದು ಹುಸಿಯಾಯಿತು. ಅವರನ್ನು ಸದಾ ನೆನಪಿಸಿಕೊಳ್ಳುವ ಮೂಲಕ ಅವರನ್ನು ಚಿರಸ್ಥಾಯಿಯನ್ನಾಗಿಸಬೇಕು. ಅವರು ನಮ್ಮ ಮಧ್ಯೆ ಇಲ್ಲದೇ ಇದ್ದರೂ ಅವರ ಆಚಾರ ವಿಚಾರಗಳು ನಮ್ಮೊಂದಿಗಿವೆ ಎಂದು ಹೇಳಿದರು.

ಇಂಗಳೇಶ್ವರದ ಚನ್ನಬಸವ ಸ್ವಾಮೀಜಿ ಮಾತನಾಡಿ, ಸಿದ್ದೇಶ್ವರ ಶ್ರೀಗಳ ಪ್ರವಚನ ಕೇಳಲು ದೂರದ ಊರಿನ ಜನರು ಬರುತ್ತಿದ್ದರು. ಅವರಿಗೆ ಡಾಕ್ಟರೇಟ್ ಪದವಿ ಸೇರಿದಂತೆ ದೇಶದ ಉನ್ನತ ಪ್ರಶಸ್ತಿ ಅರಸಿ ಬಂದರು ಸ್ವೀಕರಿಸಲಿಲ್ಲ. ತಮ್ಮ ಜೀವನವನ್ನು ಸಮಾಜಕ್ಕಾಗಿ ಸವೆಸಿದರು. ಶ್ರೀಗಳ ಮಾತಿನಲ್ಲಿ ಬೆಳಕು ಕಾಣುತ್ತಿತ್ತು. ಅವರ ತ್ಯಾಗ ಜೀವನ, ಆದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಯರನಾಳದ ಸಂಗನಬಸವ ಸ್ವಾಮೀಜಿ, ಸ್ಥಳೀಯ ವಿರಕ್ತಮಠದ ಸಿದ್ಧಲಿಂಗ ಸ್ವಾಮೀಜಿ, ಚಿಮ್ಮಲಗಿಯ ರೇಣುಕ ಶಿವಾಚಾರ್ಯ ಸ್ವಾಮೀಜಿ, ಮಸಬಿನಾಳದ ಸಿದ್ಧರಾಮ ಸ್ವಾಮೀಜಿ, ಸಾಹಿತಿ ಲ.ರು.ಗೊಳಸಂಗಿ ಮಾತನಾಡಿದರು,
ಶಿವಾನಂದ ಈರಕಾರ ಮುತ್ಯಾ, ಸಂಗಪ್ಪ ಅಡಗಿಮನಿ ಇದ್ದರು.
ಸಹಕಾರ ಮಹಾಮಂಡಳ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ ಸ್ವಾಗತಿಸಿದರು, ಶಿಕ್ಷಕ ಎಚ್.ಬಿ.ಬಾರಿಕಾಯಿ ನಿರೂಪಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಲಿಂ.ಸಿದ್ದೇಶ್ವರ ಸ್ವಾಮೀಜಿ, ಚಿಮ್ಮಲಗಿಯ ಲಿಂ. ನೀಲಕಂಠ ಶಿವಾಚಾರ್ಯ ಸ್ವಾಮೀಜಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮೌನಾಚರಣೆ ಮಾಡಲಾಯಿತು.


Spread the love

About Yuva Bharatha

Check Also

ಹಿರೇಬೂದನೂರ : ಭಕ್ತರ ಸನ್ಮಾನ

Spread the loveಹಿರೇಬೂದನೂರ : ಭಕ್ತರ ಸನ್ಮಾನ ಮುರಗೋಡ : ಹಿರೇಬೂದನೂರ ಗ್ರಾಮದ ಶ್ರೀ ಸದ್ಗುರು ಸಂತ ಬಾಳುಮಾಮಾ ದೇವಸ್ಥಾನದ …

Leave a Reply

Your email address will not be published. Required fields are marked *

thirteen − 1 =