Breaking News

ಕಾನೂನಿಗೆ ಸಂಬಂಧಿಸಿದ ಕನ್ನಡ ನಿಘಂಟು ತಯಾರಿಸಲು ಸಿಎಂ ಸೂಚನೆ

Spread the love

ಕಾನೂನಿಗೆ ಸಂಬಂಧಿಸಿದ ಕನ್ನಡ ನಿಘಂಟು ತಯಾರಿಸಲು ಸಿಎಂ ಸೂಚನೆ

ಯುವ ಭಾರತ ಸುದ್ದಿ ಬೆಂಗಳೂರು:
ನ್ಯಾಯಾಂಗ ಹಾಗೂ ಕಾನೂನಿಗೆ ಸಂಬಂಧಿಸಿದ ಎಲ್ಲ ಪಾರಿಭಾಷಿಕ ಪದಗಳನ್ನು ಒಳಗೊಂಡ ಕನ್ನಡ‌ ನಿಘಂಟು ರೂಪಿಸುವುದು ಹಾಗೂ ನ್ಯಾಯಾಲಯಗಳ ತೀರ್ಪುಗಳನ್ನು ಕನ್ನಡಕ್ಕೆ ತರ್ಜುಮೆ ಮಾಡುವ ಕೆಲಸ ಆರಂಭಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೂಚಿಸಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಕನ್ನಡದಲ್ಲಿ ತೀರ್ಮಾನ ನೀಡಿದ ನ್ಯಾಯಾಧೀಶರು, ವಾದ ಮಂಡಿಸಿದ ಪಬ್ಲಿಕ್ ಪ್ರಾಸಿಕ್ಯೂಟರ್ ಗಳು ಹಾಗೂ ವಕೀಲರಿಗೆ ‘ನ್ಯಾಯಾಂಗದಲ್ಲಿ ಕನ್ನಡ ಪ್ರಶಸ್ತಿ’ ಪ್ರದಾನ ಮಾಡಿ ಅವರು ಮಾತನಾಡಿದರು.

ನ್ಯಾಯಾಂಗದಲ್ಲಿ ಕನ್ನಡ ಬಳಕೆಗೆ ಹಲವು ಮಿತಿಗಳಿವೆ.‌ ಅವುಗಳನ್ನು ಮೀರಿ ಕನ್ನಡ ಬಳಸಬೇಕಾದರೆ ಕನ್ನಡದ ನಿಘಂಟು ಅಗತ್ಯ. ನ್ಯಾಯಾಲಯಗಳ ತೀರ್ಪು ಮತ್ತು ಆದೇಶಗಳನ್ನು ಜನರು ಅರ್ಥ ಮಾಡಿಕೊಳ್ಳಬೇಕಾದರೆ ಅವುಗಳನ್ನು ಆನ್ಲೈನ್ ನಲ್ಲಿ ಪ್ರಕಟಿಸಬೇಕು.‌ ಈ ಕೆಲಸವನ್ನು ಪ್ರಾಧಿಕಾರ ಮಾಡಬೇಕು ಎಂದರು.

ಪ್ರಕರಣವೊಂದರಲ್ಲಿ ನ್ಯಾಯಾಲಯದ ತೀರ್ಮಾನ ಬರುವುದಷ್ಟೇ ಮುಖ್ಯವಲ್ಲ. ಆ ತೀರ್ಮಾನದ ಸರಿಯಾದ ವ್ಯಾಖ್ಯಾನ ಮತ್ತು ಅನುಷ್ಠಾನ ಅಗತ್ಯ. ಕೆಲವೊಮ್ಮೆ‌ ಅಧಿಕಾರಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ನ್ಯಾಯಾಲಯದ ತೀರ್ಮಾನವನ್ನು ವ್ಯಾಖ್ಯಾನ ಮಾಡುತ್ತಾರೆ. ಇಂತಹ ಅಪಾಯ ತಡೆಯಬೇಕಾದರೆ ಆಡಳಿತ ನಡೆಸುವವರಿಗೆ ಕಾನೂನಿನ ಜ್ಞಾನ ಇರಬೇಕಾಗುತ್ತದೆ ಎಂದು ಹೇಳಿದರು.

ಹೈಕೋರ್ಟ್ ನ್ಯಾಯಮೂರ್ತಿ ಜಿ.‌ ನರೇಂದರ್ ಮಾತನಾಡಿ, ‘ನ್ಯಾಯಾಂಗದಲ್ಲಿ ಕನ್ನಡದ‌ ಬಳಕೆಯಿಂದ ಜನಸಾಮಾನ್ಯರಲ್ಲಿ ಕಾನೂನಿನ ಅರಿವು ಮೂಡುತ್ತದೆ.‌ ಕಾನೂನು ಉಲ್ಲಂಘನೆ ಮತ್ತು ಅಪರಾಧಗಳು ತಗ್ಗುತ್ತವೆ’ ಎಂದರು.

ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.‌ಸುನಿಲ್ ಕುಮಾರ್, ಕನ್ನಡ‌ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಡಾ.ಎನ್. ಮಂಜುಳಾ, ವಿಶ್ರಾಂತ ಕುಲಪತಿ ಮಲ್ಲೇಪುರಂ‌ ಜಿ. ವೆಂಕಟೇಶ್, ಕನ್ನಡ‌ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಶಿ ಉಪಸ್ಥಿತರಿದ್ದರು.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

nineteen + sixteen =