Breaking News

ಮೂಡಲಗಿ : ರಡ್ಡಿ ಸಮಾಜಕ್ಕೆ 22 ಗುಂಟೆ ನಿವೇಶನ – ಶಾಸಕ ಬಾಲಚಂದ್ರ ಜಾರಕಿಹೊಳಿ

Spread the love

ಮೂಡಲಗಿ : ರಡ್ಡಿ ಸಮಾಜಕ್ಕೆ 22 ಗುಂಟೆ ನಿವೇಶನ – ಶಾಸಕ ಬಾಲಚಂದ್ರ ಜಾರಕಿಹೊಳಿ

 

ಯುವ ಭಾರತ ಸುದ್ದಿ ಮೂಡಲಗಿ:  ಮೂಡಲಗಿ ತಾಲೂಕಿನ ರಡ್ಡಿ ಸಮಾಜ ಭಾಂದವರಿಗೆ ಸಮುದಾಯ ಭವನ ನಿರ್ಮಿಸಲು ಪುರಸಭೆಯಿಂದ 22 ಗುಂಟೆ ನಿವೇಶನ ನೀಡಲಾಗುವುದು ಎಂದು ಶಾಸಕ ಹಾಗೂ ಕೆ.ಎಮ್.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಭರವಸೆ ನೀಡಿದರು.

ಬುಧವಾರದಂದು ಮೂಡಲಗಿ ಪಟ್ಟಣದ ಬಸವ ರಂಗ ಮಂಟಪದಲ್ಲಿ ತಾಲೂಕಾ ಮಟ್ಟದ ರಡ್ಡಿ ಬಳಗ ಹಮ್ಮಿಕೊಂಡಿದ್ದ ದಾರ್ಶನಿಕ ಕವಿ, ಮಹಾಯೋಗಿ ವೇಮನರ 611ನೇ ಜಯಂತ್ಯುತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಾಜ ಬಾಂಧವರು ಈ ಸಮುದಾಯ ಭವನವನ್ನು ಸದ್ಭಳಕೆ ಮಾಡಿಕೊಳ್ಳುವಂತೆ ತಿಳಿಸಿದರು.

ಪಟ್ಟಣದ ಈರಣ್ಣ ದೇವಸ್ಥಾನ ಹತ್ತಿರದ ಸೋನವಾಲ್ಕರ ಪ್ಲಾಟದಲ್ಲಿರುವ ಈ ನಿವೇಶನವು ಕೆಲ ಕಾರಣಗಳಿಂದ ಸರಕಾರವು ತಾಲೂಕಾ ಪಂಚಾಯತಿಗೆ ಮಂಜೂರು ಮಾಡಿತ್ತು. ಆದರೆ ಸಮಾಜ ಬಾಂಧವರ ಬೇಡಿಕೆಯಂತೆ ಅನುಕೂಲವಾಗಲು ತಾ.ಪಂಗೆ ನೀಡಿರುವ ನಿವೇಶನದ ಮಂಜೂರಾತಿಯನ್ನು ಕೂಡಲೇ ರದ್ದುಪಡಿಸಿ ರಡ್ಡಿ ಸಮಾಜಕ್ಕೆ ನೀಡಲಾಗುವುದು. ಫೆಬ್ರುವರಿ ತಿಂಗಳಲ್ಲಿ ಜರುಗುವ ಪುರಸಭೆ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಸರ್ವಾನುಮತದ ಗೊತ್ತುವಳಿಯನ್ನು ಅಂಗೀಕರಿಸುವಂತೆ ಪುರಸಭೆ ಅಧ್ಯಕ್ಷರಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಸೂಚನೆ ನೀಡಿದರು.

ರಡ್ಡಿ ಸಮಾಜವು ಆರ್ಥಿಕವಾಗಿ ಬಲಾಢ್ಯ ಹೊಂದಿದೆ, ಇದರ ಜೊತೆಗೆ ಶಿಕ್ಷಣದಲ್ಲಿ ಪ್ರಗತಿ ಸಾಧಿಸಬೇಕಿದೆ, ಕೃಷಿ ಕ್ಷೇತ್ರಕ್ಕೆ ಪ್ರಾಶಸ್ತ್ಯ ನೀಡುತ್ತಿರುವ ಈ ಸಮಾಜವು ಮುಖ್ಯ ವಾಹಿನಿಗೆ ಬರಬೇಕಾಗಿದೆ, ಸಮಾಜಕ್ಕೆ ಅಗತ್ಯವಿರುವ ಎಲ್ಲ ಸವಲತ್ತುಗಳನ್ನು ಮಾಡಿಕೊಡಲು ಸಿದ್ಧನಿದ್ದೇನೆ ಎಂದು ಹೇಳಿದರು.

ಮಹಾಯೋಗಿ, ದಾರ್ಶನಿಕ ವೇಮನ ತತ್ವಾದರ್ಶಗಳು ಇಂದಿಗೂ ಪ್ರಸ್ತುತವಾಗಿವೆ, ಇಂದಿನ ಯುವ ಜನಾಂಗವು ಜಗತ್ತಿನ ಶ್ರೇಷ್ಠ ವಚನಕಾರರಾಗಿರುವ ವೇಮನರ ಆದರ್ಶಗಳನ್ನು ಪಾಲಿಸುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ಮಾಜಿ ಸಚಿವ ಬಿ.ಆರ್.ಯಾವಗಲ್ಲ ಮಾತನಾಡಿ, ಸಮಾಜದ ಎಲ್ಲ ಸ್ಥರದ ಜನರಿಗೆ ಉತ್ತಮ ಸಂದೇಶಗಳನ್ನು ನೀಡಿರುವ ವೇಮನರ ಕೊಡುಗೆ ಅಪಾರವಾಗಿದೆ. ವೇಮನರು ಹಾಗೂ ಹೇಮರಡ್ಡಿ ಮಲ್ಲಮ್ಮನ ಆದರ್ಶಗಳು ಈ ಸಮಾಜಕ್ಕೆ ದಾರಿದೀಪವಾಗಿವೆ ಎಂದು ತಿಳಿಸಿದರು.
ರಾಜ್ಯ ಸಭಾ ಸದಸ್ಯ ಈರಣ್ಣಾ ಕಡಾಡಿ ಮಾತನಾಡಿ, ರಡ್ಡಿ ಸಮಾಜ ಬಾಂಧವರು ಒಗ್ಗಟ್ಟಾಗಿ ವೇಮನ ಜಯಂತಿ ಕಾರ್ಯಕ್ರಮವನ್ನು ಆಚರಿಸುತ್ತಿರುವದಕ್ಕೆ ಸಂತಸ ವ್ಯಕ್ತಪಡಿಸಿದರು.

ಸಾನ್ನಿಧ್ಯವನ್ನು ವಹಿಸಿದ್ದ ಹರಿಹರ ತಾಲೂಕಿನ ಎರೆಹೊಸಳ್ಳಿಯ ವೇಮನ ರಡ್ಡಿ ಗುರುಪೀಠದ ವೇಮನಾನಂದ ಶ್ರೀಗಳು, ಸುಣಧೋಳಿಯ ಶಿವಾನಂದ ಶ್ರೀಗಳು, ಮುನ್ಯಾಳ-ರಂಗಾಪೂರದ ಡಾ. ಶಿವಲಿಂಗ ಮುರಘರಾಜೇಂದ್ರ ಶಿವಾಚಾರ್ಯ ಶ್ರೀಗಳು, ಮುನ್ಯಾಳದ ಲಕ್ಷ್ಮಣ ದೇವರು ಆಶೀರ್ವಚನ ನೀಡಿದರು.
ವಾಣಿಜ್ಯ ತೆರಿಗೆ ನಿವೃತ್ತ ಉಪ ಆಯಕ್ತ ಜಿ.ಬಿ.ಗೌಡಪ್ಪಗೋಳ, ರಾಮದುರ್ಗದ ಸರಕಾರಿ ಪ್ರೌಢ ಶಾಲೆಯ ಶಿಕ್ಷಕ ಆನಂದ ಪಾಟೀಲ ಅವರು ವೇಮನರ ಕುರಿತು ಉಪನ್ಯಾಸ ನೀಡಿದರು.
ಅಧ್ಯಕ್ಷತೆಯನ್ನು ಪುರಸಭೆ ಮಾಜಿ ಅಧ್ಯಕ್ಷ ಎಸ್.ಆರ್.ಸೋನವಾಲ್ಕರ ವಹಿಸಿದ್ದರು.
ಮೂಡಲಗಿ ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಮನಿ.ಡಾ.ಗಿರೀಶ ಸೋನವಾಲ್ಕರ ಉಪಸ್ಥಿತರಿದ್ದರು. ಸಮಾಜದ ಸಾಧಕರನ್ನು ಸನ್ಮಾನಿಸಿ ಗೌರವಿಸಿದರು.

ಜಯಂತ್ಯುತ್ಸವ ಅಂಗವಾಗಿ ಮಹಿಳೆಯರಿಂದ ವೇಮನರ ತೋಟ್ಟಿಲೋತ್ಸವ, ಸುಮಂಗಲಿಯರ ಉಡಿತುಂಬುವ ಕಾರ್ಯಕ್ರಮ ಜರುಗಿತು. ಮೂಡಲಗಿ ಶಿಕ್ಷಣ ಸಂಸ್ಥೆಯ ಹತ್ತಿರ ವೇಮನರ ಭಾವ ಚಿತ್ರದ ಭವ್ಯ ಮೆರವಣಿಗೆಗೆ ದತ್ತಾತ್ರೇಯಬೋಧ ಶ್ರೀಗಳು ಚಾಲನೆ ನೀಡಿದರು. ಮಹಿಳೆಯರ ಕುಂಭಮೇಳವು ಸಕಲವಾದ್ಯ ಮೇಳದೊಂದಿಗೆ ಜರುಗಿತು.


Spread the love

About Yuva Bharatha

Check Also

31 ವಿವೇಕ ಶಾಲಾ ಕೊಠಡಿಗಳ ನಿರ್ಮಾಣಕ್ಕೆ 4.37 ಕೋಟಿ ರೂ. ಬಿಡುಗಡೆ : ಶಾಸಕ ಬಾಲಚಂದ್ರ ಜಾರಕಿಹೊಳಿ

Spread the love31 ವಿವೇಕ ಶಾಲಾ ಕೊಠಡಿಗಳ ನಿರ್ಮಾಣಕ್ಕೆ 4.37 ಕೋಟಿ ರೂ. ಬಿಡುಗಡೆ : ಶಾಸಕ ಬಾಲಚಂದ್ರ ಜಾರಕಿಹೊಳಿ …

Leave a Reply

Your email address will not be published. Required fields are marked *

seven + 7 =