Breaking News

ತುಂಬಿ ತುಳುಕುತ್ತಿದೆ ಈ ಕೆರೆ..ಮುಳವಾಡ ಏತ ನೀರಾವರಿ…!

Spread the love

ತುಂಬಿ ತುಳುಕುತ್ತಿದೆ ಈ ಕೆರೆ..ಮುಳವಾಡ ಏತ ನೀರಾವರಿ…!

ಖಾಜು ಸಿಂಗೆಗೋಳ

ಯುವ ಭಾರತ ಸುದ್ದಿ  ಇಂಡಿ : ಮುಳವಾಡ ಏತ ನೀರಾವರಿ ಹಂತ-3ರ ಅಡಿಯಲ್ಲಿ ಬರುವ ತಿಡಗುಂದಿ ಶಾಖಾ ಕಾಲುವೆಯ ಕಿ.ಮೀ56 ರಿಂದ 66 ವರೆಗಿನ ಕಾಮಗಾರಿಯ ಮುಖಾಂತರ ರಾಜನಾಳ(ಅಥರ್ಗಾ),ತಡವಲಗಾ ಹಾಗೂ ಹಂಜಗಿ ಕೆರೆಗಳನ್ನು ತುಂಬಿಸುವ 100.49 ಕೋಟಿ ರೂ.ಗಳ ಯೋಜನೆ ಯಶಸ್ವಿಯಾಗಿದ್ದು,ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ,ಸಂಸದ ರಮೇಶ ಜಿಗಜಿಣಗಿ,ಶಾಸಕ ಯಶವಂತರಾಯಗೌಡ ಪಾಟೀಲ ಅವರ ವಿಶೇಷ ಕಾಳಜಿಯಿಂದ ೩ ಕರೆಗಳಿಗೆ ಕೃಷ್ಣೆ ಹರಿದು ಬಂದು ಭೀಮಾಸಿರಿಯ ಕೆರೆಗಳಲ್ಲಿ ಸಮುದ್ರದಂತೆ ಕಂಗೊಳಿಸುತ್ತಿದ್ದಾಳೆ.
ಕೃಷ್ಣಾ ಭಾಗ್ಯ ಜಲ ನಿಗಮದ ಮೂಲಕ ಇಂಡಿ ತಾಲೂಕಿನ ಅಥರ್ಗಾ,ಮಿಂಚನಾಳ,ಲಿಂದಹಳ್ಳಿ,ನಿಂಬಾಳ ಕೆಡಿ,ಚವಡಿಹಾಳ ಸುತ್ತಮುತ್ತಲಿನ ರಾಜನಾಳ,ತಡವಲಗಾ,ಹಂಜಗಿ ಕೆರೆಗಳಿಗೆ ಕೃಷ್ಣೆ ಆಗಮವಾಗಿದ್ದು,ಎಲ್ಲ ಕೆರೆಗಳು ಭರ್ತಿಯಾಗಿ ಉಳಿದ ಸಣ್ಣ ಪ್ರಮಾಣದ ಕರೆ,ಹಳ್ಳ,ಕೊಳ್ಳಗಳಿಗೆ ಹರಿದಿದ್ದು,ರೈತರು,ಗ್ರಾಮಸ್ಥರ ಮುಖದಲ್ಲಿ ಮಂದಹಾಸ ಬಿರೀದೆ.
ನೀರು ಬಂಗಾರದ ಹಾಗೆ ಕಾಣುವ ಹಂಜಗಿ,ತಡವಲಗಾ,ಅಥರ್ಗಾ ಸುತ್ತಮುತ್ತಲಿನ ಗ್ರಾಮಗಳ ರೈತರು,ಸಾರ್ವಜನಿಕರಿಗೆ ಕೃಷ್ಣಾ ನದಿ ನೀರು ಕೆರೆಗಳಿಗೆ ತುಂಬಿ ಹರಿಯುತ್ತಿರುವುದರಿಂದ ಎಲ್ಲರಿಗೂ ತುಪ್ಪ ಉಂಡಷ್ಟು ಖುಷಿಯಾಗಿದೆ.ಬೇಸಿಗೆ ಬಂದರೆ ಅಂತರ್ಜಲಮಟ್ಟ ಕುಸಿದು,ಸಾವಿರ ಫ್ಯೂಟ್ ಆಳದಲ್ಲಿ ಬೊರವೆಲ್ ಕೊರೆಯಿಸಿದ್ದರೂ ನೀರು ಬರದ ಪ್ರದೇಶದಲ್ಲಿ,ರೈತರು,ಜನ,ಜಾನುವಾರುಗಳಿಗೆ ಕುಡಿಯಲು ನೀರಿನ ಕೊರತೆ ಅನುಭವಿಸುವ ಸಂಕಷ್ಟದ ಕಾಲ ಕಳೆಯುತ್ತಿದ್ದ ಜನರು ಇಂದು ಕೆರೆಗಳು ಭರ್ತಿಯಾಗಿದ್ದರಿಂದ ಸಂತೋಷ ಗೊಂಡಿದ್ದಾರೆ.
ತಿಡಗುಂದಿ ಶಾಖಾ ಕಾಲುವೆಯ ಕಿ.ಮೀ.56 ರ ನಂತರ ಗುರುತ್ವಾಕರ್ಷಣೆ ಎಂ.ಎಸ್.ಪೈಪ್ ವಿತರಣೆ ಜಾಲದ ಮೂಲಕ ಕೆರೆಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ.ಈ ಯೋಜನೆಯಿಂದ ಸುಮಾರು 14,5೦೦ ಹೆಕ್ಟರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ.ಇಂಡಿ ತಾಲೂಕಿನ ರಾಜನಾಳ,ಅಥರ್ಗಾ,ಮಿಂಚನಾಳ,ಲಿಂಗದಹಳ್ಳಿ,ಗಣವಲಗಾ,ನಿಂಬಾಳಬಿಕೆ,ತೆನ್ನಿಹಳ್ಳಿ,ಬೋಳೆಗಾಂವ,ಹಂಜಗಿ,ರೂಗಿ,ಇಂಡಿ,ಚಿಕ್ಕಬೇವನೂರ,ಚವಡಿಹಾಳ,ಬಬಲಾದ,ಚೋರಗಿ ಸೇರಿದಂತೆ 15 ಗ್ರಾಮಗಳು ನೀರಾವರಿಗೆ ಒಳಪಡುತ್ತವೆ.
ಸಂಭ್ರಮಿಸಿದ ರೈತ ಸಮೂಹ: ರೈತ ಸಮೂಹ ಅನೇಕ ವರ್ಷಗಳಿಂದ ಕೆರೆಯಲ್ಲಿ ನೀರಿಲ್ಲದ ದೃಶ್ಯಗಳನ್ನು ನೋಡಿದ್ದು,ಇದೀಗ ಈ ಭಾಗದ ಕೆರೆಗಳಿಗೆ ನೀರು ಬಂದಿರುವುದು ಕಂಡು ಸಂಭ್ರಮಿಸಿದ್ದಾರೆ.ಇಂತಹ ದೂರದೃಷ್ಠಿ ಹಾಗೂ ಇಂತಹ ಮಹತ್ವಪೂರ್ಣ ಯೋಜನೆಗೆ ಜಯಕಾರ ಹಾಕಿದ್ದಾರೆ.

“ತಾಲೂಕಿನ ಹಂಜಗಿ ಕೆರೆ ಅಂದಾಜು ೬೪೦ ಎಕರೆ ವಿಸ್ತಾರವಾಗಿದ್ದು,ಸುಮಾರು ೭೦ ಎಂಸಿಎಫ್‌ಟಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಈ ಕೆರೆ ೧೪ ವರ್ಷದ ಬಳಿಕ ಇಂದು ಭರ್ತಿಯಾಗಿದೆ.ಈ ಕೆರೆಯ ಮೂಲಕವೇ ತಾಲೂಕಿನ ೩೩ ಗ್ರಾಮಗಳಿಗೆ ಅನುಕೂಲವಾಗುವ ಬಹುಹಳ್ಳಿ ಕುಡಿಯುವ ನೀರಿನ ಯೋಜನೆಗೂ ಅನುಕೂಲವಾಗಿದೆ. ಕೆರೆಗೆ ನೀರು ತುಂಬಿರುವುದು ಊಟ ಮಾಡಿದಷ್ಟು ಸಂತಸವಾಗಿದೆ.ಈ ಕೆರೆ ಭರ್ತಿಯಾದರೆ ಸುಮಾರು ೩ ವರ್ಷ ಮಳೆ ಬಾರದಿದ್ದರೂ ಅಂತರ್ಜಲಮಟ್ಟ ಹೆಚ್ಚಾಗಿ ನೀರಾವರಿ,ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುತ್ತದೆ.ಕೆರೆಗೆ ನೀರು ತುಂಬಿಸಲು ಶ್ರಮಿಸಿದ ಎಲ್ಲರಿಗೂ ಅಭಿನಂದಿಸುತ್ತೇವೆ ಎನ್ನುತ್ತಾರೆ” ಹಂಜಗಿ ಗ್ರಾಮದ ಮುಖಂಡ ರೈತ ಮುತ್ತಪ್ಪ ಪೋತೆ.

“ರಾಜನಾಳ(ಅಥರ್ಗಾ) ಕೆರೆ:ಈ ಕೆರೆ ೪೫೦ ಎಕರೆ ವಿಸ್ತಾರ ಹೊಂದಿದ್ದು,ಸುಮಾರು ೩೫ ಎಂಸಿಎಫ್‌ಟಿ ನೀರು ಸಂಗ್ರಹವಾಗುವ ಸಾಮರ್ಥ್ಯ ಹೊಂದಿದೆ.ರಾಜ್ಯ ಬಿಜೆಪಿ ಸರ್ಕಾರ ೧೦೦.೪೯ ರೂ.ಗಳಷ್ಟು ಅನುಧಾನ ನೀಡಿ,ಕೆರೆಗಳನ್ನು ತುಂಬಿಸಿದ್ದರಿಂದ ಅಥರ್ಗಾ ಸುತ್ತಮುತ್ತಲಿನ ಗ್ರಾಮಗಳಿಗೆ ನೀರಿನ ಅನುಕೂಲವಾಗಿದೆ. ಬೊರವೆಲ್,ಬಾವಿಗಳು ಅಂತರ್ಜಲಮಟ್ಟ ಹೆಚ್ಚಾಗಿ ನೀರು ಸಂಗ್ರಹವಾಗುತ್ತಿದೆ. ಈ ಭಾಗದ ರೈತರಿಗೆ ತುಂಬಾ ಅನುಕೂಲವಾಗಿದೆ. ಬೆಸಿಗೆಯಲ್ಲಿ ಭೂಮಿಯಲ್ಲಿ ನೀರಿನ ಅಂಶವೇ ಕಾಣದ ಈ ಪ್ರದೇಶದಲ್ಲಿ ಇಂದು ಕೆರೆಗೆ ನೀರು ಬಂದಿರುವುದಿಂದ ಅಂತರ್ಜಲಮಟ್ಟ ಹೆಚ್ಚಾಗಿದೆ. ಕೆರೆಗಳಿಗೆ ನೀರು ತುಂಬಿಸಲು ಶ್ರಮಿಸಿದ ಸಚಿವ ಗೋವಿಂದ ಕಾರಜೋಳ, ಸಂಸದ ರಮೇಶ ಜಿಗಜಿಣಗಿ,ಅಧಿವೇಶನದಲ್ಲಿ ಧ್ವನಿ ಎತ್ತಿದ ಶಾಸಕ ಯಶವಂತರಾಯಗೌಡ ಪಾಟೀಲ ಅವರಿಗೆ ಅಥರ್ಗಾ ಗ್ರಾಮಸ್ಥರ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಎನ್ನುತ್ತಾರೆ” ಅಥರ್ಗಾ ಗ್ರಾಮದ ತಾಪಂ ಸದಸ್ಯ ಗಣಪತಿ ಬಾಣಿಕೋಲ.

“ತಡವಲಗಾ ಕೆರೆ:ಈ ಕೆರೆ 2008 ರಲ್ಲಿ ಮಹಾಮಳೆಯಿಂದ ಭರ್ತಿಯಾಗಿದ್ದು,ನಂತರದ ದಿನದಲ್ಲಿ ಬತ್ತಿಹೋಗಿತ್ತು.ಸಧ್ಯ ಕೆರೆಗೆ ನೀರು ಬಂದಿರುವುದರಿಂದ ಈ ಭಾಗದಲ್ಲಿ ಮೊದಲಿನಿಂದಲೂ ಪ್ರಸಿದ್ದಿ ಪಡೆದಿರುವ ಲಿಂಬೆ ಬೆಳೆಗಾರರಿಗೆ,ಕುಡಿಯುವ ನೀರಿಗೆ ಅನುಕೂಲವಾಗಿದೆ.ಸುಮಾರು ೩೬೦ ಎಕರೆ ಪ್ರದೇಶದಲ್ಲಿರುವ ಈ ಕೆರೆಯಲ್ಲಿ ೫೦ ಎಂಸಿಎಫ್‌ಟಿ ನೀರು ಸಂಗ್ರಹವಾಗುತ್ತದೆ.ಸುಮಾರು 4-5 ವರ್ಷದ ಹಿಂದೆ ನೀರಿನ ಕೊರತೆಯಿಂದ ಬಹುಬೆಳೆ ಲಿಂಬೆ ಒಣಗಿದ್ದರಿಂದ ರೈತರು ಕಣ್ಣೀರು ಸುರಿಸುತ್ತ ಲಿಂಬೆ ಬೆಳೆ ಕಡಿದು ಜಮೀನದ ಬದುವಿಗೆ ಹಾಕಿದ್ದಾರೆ.ನೀರಿನ ಕಷ್ಟದ ದಿನಗಳು ನೆನಪಿಸಿಕೊಂಡರೆ ನೋವಾಗುತ್ತದೆ.ಸಧ್ಯ ಶಾಸಕ ಯಶವಂತರಾಯಗೌಡ ಪಾಟೀಲ ಅವರ ವಿಶೇಷ ಕಾಳಜಿಯಿಂದ ಸರ್ಕಾರದ ಮೇಲೆ ಒತ್ತಡ ಹೇರಿ ಕೆರೆಗೆ ನೀರು ಹರಿಸಿದ್ದಾರೆ ಎನ್ನುತ್ತಾರೆ” ತಡವಲಗಾ ಗ್ರಾಮದ ಅಶೋಕ ಮಿರ್ಜಿ.

ಇಂಡಿ ತಾಲೂಕಿನ ಎಲ್ಲ ಕೆರೆಗಳು ತುಂಬಿಸಬೇಕು. ನೀರಾವರಿ ಆಗದ ಪ್ರದೇಶ ನೀರಾವರಿಗೆ ಒಳಪಡಿಸಲು ಸರ್ಕಾರ ಯೋಜನೆ ರೂಪಿಸಿ ಅನುಧಾನ ಬಿಡುಗಡೆ ಮಾಡಬೇಕು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಅವರು ಸದನದಲ್ಲಿ ಧ್ವನಿ ಎತ್ತುವ ಮೂಲಕ ಸರ್ಕಾರದ ಗಮನ ಸೆಳೆದಿದ್ದರು.ಅಲ್ಲದೆ ಝಳಕಿಯಲ್ಲಿ ರೈತರು,ಇಂಡಿಯಲ್ಲಿ ಜೆಡಿಎಸ್ ನೇತ್ರತ್ವದಲ್ಲಿ ಧರಣಿ ಸತ್ಯಾಗ್ರಹ,ರಕ್ತದ ಮೂಲಕ ಪತ್ರ ಚಳುವಳಿ,ಹೆದ್ದಾರೆ ತಡೆದು ಪ್ರತಿಭಟನೆ ಮಾಡಿ ಸರ್ಕಾರದ ಮೇಲೆ ಒತ್ತಡ ಹೆರಿದ್ದರು.

        

ಸದಾ ಬರಗಾಲದಿಂದ ತತ್ತರಿಸಿ ಹೋಗಿರುವ ಇಂಡಿ ಭಾಗ ಸಂಪೂರ್ಣ ನೀರಾವರಿ ಆಗಬೇಕು.ಈ ಭಾಗದ ಕೆರೆಗಳು ತುಂಬಬೇಕು ಎಂಬುದು ನನ್ನ ಆಸೆಯಾಗಿದೆ. ಈಗಾಗಲೆ ತಾಲೂಕಿನ ಬಹುಮುಖ್ಯ ದೊಡ್ಡ ಕೆರೆಗಳು ಭರ್ತಿಯಾಗಿವೆ.ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಯೊಂದು ಪೂರ್ಣಗೊಂಡರೆ ಸಂತಸವಾಗುತ್ತದೆ.ಅದಕ್ಕೂ ಶೀಘ್ರದಲ್ಲಿ ಚಾಲನೆ ದೊರೆಯಲಿದೆ.ಹೊರ್ತಿ,ತಡವಲಗಾ,ಹಂಜಗಿ,ಅಥರ್ಗಾ ಗ್ರಾಮದ ರೈತರು,ಜನರು ಬೆಸಿಗೆಯಲ್ಲಿ ಕುಡಿಯುವ ನೀರಿಗಾಗಿ ತೊಂದರೆ ಅನುಭವಿಸುತ್ತಿದ್ದಿರುವುದು,ಬೆಳೆಗಳಿಗೆ ಟ್ಯಾಂಕರ ಮೂಲಕ ನೀರು ಹಾಯಿಸಿ,ಬೆಳೆ ಉಳಿಸಿಕೊಳ್ಳುತ್ತಿರುವುದು ಕಂಡಿದ್ದೇನೆ. ರೈತರ ನೋವು ಅರಿತು ಈ ಭಾಗದ ಕೆರೆಗಳನ್ನು ತುಂಬಿಸಬೇಕು. ತಾಲೂಕಿನ ಎಲ್ಲ ಪ್ರದೇಶ ನೀರಾವರಿಗೆ ಒಳಪಡಿಸಲು ಫಣತೊಟ್ಟು ಸದನದಲ್ಲಿ ಸರ್ಕಾರದ ಗಮನ ಸೆಳೆದಿದ್ದೇನೆ. ಮೂರು ಕೆರೆಗಳನ್ನು ತುಂಬಲು ರಾಜ್ಯ ಸರ್ಕಾರ ಅನುಧಾನ ಬಿಡುಗಡೆ ಮಾಡಿ ಕಾಮಗಾರಿ ಆರಂಭಿಸಿ ಕೆರೆಗೆ ನೀರು ತುಂಬಿಸಲಾಗಿದೆ. ಈ ಯೋಜನೆಗೆ ಅನುಧಾನ ಒದಗಿಸಿ,ಕೆರೆಗೆ ನೀರು ತುಂಬಲು ಕಾರಣರಾದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ,ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ,ಸಂಸದ ರಮೇಶ ಜಿಗಜಿಣಗಿ ಅವರಿಗೆ ಪಕ್ಷಾತೀತವಾಗಿ ಅಭಿನಂದನೆ ಸಲ್ಲಿಸುತ್ತೇನೆ.ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ,ಸಂಸದ ರಮೇಶ ಜಿಗಜಿಣಗಿ ಅವರ ಸಮ್ಮುಖ,ನನ್ನ ಅಧ್ಯಕ್ಷತೆಯಲ್ಲಿ 2121 ಮಾ.21 ರಂದು ಅಥರ್ಗಾ ಗ್ರಾಮದಲ್ಲಿ ರಾಜನಾಳ,ತಡವಲಗಾ,ಹಂಜಗಿ ಕೆರೆಗಳನ್ನು ತುಂಬಿಸುವ ಯೋಜನೆಗೆ ಭೂಮಿಪೂಜೆ ಸಮಾರಂಭ ನಡೆದಿತ್ತು.ಕಾಲಮಿತಿಯೊಳಗೆ ಕೆರೆಗಳನ್ನು ತುಂಬುವ ಕಾರ್ಯ ನಡೆದಿದೆ– ಯಶವಂತರಾಯ ಗೌಡ ಪಾಟೀಲ, ಶಾಸಕರು,ಇಂಡಿ.


Spread the love

About Yuva Bharatha

Check Also

13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ

Spread the love13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ ಬೆಳಗಾವಿ: “ವಕೀಲರು ನ್ಯಾಯಾಲಯದ …

Leave a Reply

Your email address will not be published. Required fields are marked *

14 − 6 =