Breaking News

ಸಾಮಾನ್ಯರಲ್ಲಿ ಸಾಮಾನ್ಯರಂತೆ ಸ್ಥಳೀಯರ ಮನೆಯಲ್ಲಿ ವಾಸ್ತವ್ಯ ಮಾಡಿ ಜನರ ಮನಸ್ಸಿನಲ್ಲಿ ಉಳಿಯುವ ಪ್ರಯತ್ನ ಮಾಡುವೆ ; ನಾಡೋಜ ಡಾ. ಮಹೇಶ ಜೋಶಿ

Spread the love

ಸಾಮಾನ್ಯರಲ್ಲಿ ಸಾಮಾನ್ಯರಂತೆ ಸ್ಥಳೀಯರ ಮನೆಯಲ್ಲಿ ವಾಸ್ತವ್ಯ ಮಾಡಿ ಜನರ ಮನಸ್ಸಿನಲ್ಲಿ ಉಳಿಯುವ ಪ್ರಯತ್ನ ಮಾಡುವೆ ; ನಾಡೋಜ ಡಾ. ಮಹೇಶ ಜೋಶಿ

ಯುವ ಭಾರತ ಸುದ್ದಿ ಬೆಂಗಳೂರು :
ಹಾವೇರಿಯಲ್ಲಿ ನಡೆಯುವ 86 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅರ್ಥಗರ್ಭಿತವಾಗಿ ನಡೆಸುವ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಹಾವೇರಿ ಜಿಲ್ಲಾಡಳಿತ ಕಾರ್ಯ ಪ್ರವೃತ್ತವಾಗಿದೆ. ಪ್ರಸಕ್ತ ಅಕ್ಷರ ಸಮ್ಮೇಳನವು ಜನ ಸಾಮಾನ್ಯ ಕನ್ನಡಿಗರ ಜಾತ್ರೆಯಾಗಬೇಕು. ಪ್ರತಿ ಮನೆ ಮನೆಗಳಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಬೇಕು ಎನ್ನುವ ಅಭಿಲಾಷೆಯನ್ನು ಹೊಂದಲಾಗಿದೆ. ಈ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಾಮಾನ್ಯರಂತೆ ಹಾವೇರಿಯ ಜನ ಸಾಮಾನ್ಯರ ಮನೆಯಲ್ಲಿ ವಾಸ್ತವ್ಯ ಮಾಡುವ ತೀರ್ಮಾನ ಮಾಡಿದ್ದೇನೆ, ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ʻಕನ್ನಡ ಸಾಹಿತ್ಯ ಪರಿಷತ್ತು ಜನ ಸಾಮಾನ್ಯರ ಪರಿಷತ್ತುʼ ಎನ್ನುವ ಪರಿಕಲ್ಪನೆಯಲ್ಲಿ ಮುನ್ನಡೆಯುತ್ತಿರುವಾಗ ʻಮನೆ-ಮನೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರುʼ ಎನ್ನುವ ಕಾರ್ಯಕ್ರಮದ ಅಡಿಯಲ್ಲಿ ನೂರಾರು ಜನರ ಮನೆಗೆ ತಾವು ಭೇಟಿ ಕೊಟ್ಟಿದ್ದು ಈ ಮೂಲಕ ಪರಿಷತ್ತಿನ ಧ್ಯೇಯ್ಯೋದ್ದೇಶವನ್ನು ಜನರ ಮನೆಯಂಗಳಕ್ಕೆ ತಲುಪಿಸುವ ಕಾರ್ಯ ಮಾಡಲಾಗುತ್ತಿದೆ. ಈಗ ಹಾವೇರಿಯ 86 ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ ಜನವರಿ 4 ರಿಂದ 8 ರ ವರೆಗೆ ಹಾವೇರಿಯಲ್ಲಿ ವಾಸ್ತವ್ಯ ಮಾಡಲಿದ್ದು ಸಮ್ಮೇಳನ ನಡೆಯುವ ಸ್ಥಳದ ಹತ್ತಿರ ಇರುವ ಅಜ್ಜಯ್ಯನ ಗುಡಿಯ ಸುತ್ತಮುತ್ತಲಿನ ಯಾವುದಾದರೂ ಒಂದು ಮನೆಯಲ್ಲಿ ಉಳಿದುಕೊಳ್ಳುವ ನಿರ್ಧಾರ ಮಾಡಿರುವುದಾಗಿ ನಾಡೋಜ ಡಾ. ಮಹೇಶ ಜೋಶಿ ತಿಳಿಸಿದ್ದಾರೆ.
ಹಾವೇರಿ ತಮ್ಮ ತವರೂರು, ಅಲ್ಲಿನ ಯಾವುದೇ ಮನೆಯಲ್ಲಿ ಇದ್ದರೂ ಅದು ತನ್ನ ಮನೆಯೇ ಎಂದು ಭಾವಿಸಿದ್ದೇನೆ. ಬಸವಣ್ಣನವರು ಹೇಳಿದಂತೆ ʻ*ಇವನ್ಯಾರವ, ಇವನ್ಯಾರವ, ಇವನ್ಯಾರವ ಎಂದೆನಿಸದಿರಯ್ಯ ಇವನಮ್ಮವ ಇವನಮ್ಮವ ಇವನಮ್ಮವ ಎಂದೆನಿಸಯ್ಯ.. ಇವ ನಮ್ಮಮನೆಯಮಗನೆನಿಸಯ್ಯ*ʼ ಎಂಬಂತೆ ತಾವು ಯಾರ ಮನೆಯಲ್ಲಿಯೇ ಇದ್ದರೂ ಅದು ನನ್ನ ಮನೆ ಎಂಬ ಭಾವನೆ ತಮ್ಮದು. ತಾವಿರುವ ಮನೆಯಲ್ಲಿ ಆ ಮನೆಯ ಮಗನಾಗಿರುವುದಾಗಿ ಇರಲು ಇಷ್ಟಪಡುತ್ತೇನೆ ಎಂದು ತಿಳಿಸಿದ್ದಾರೆ.
ಸಾಮಾನ್ಯರಲ್ಲಿ ಸಾಮಾನ್ಯರಂತೆ ಬದುಕಲು ಇಷ್ಟಪಡುವುದರಿಂದ ಯಾವುದೇ ವಿಶೇಷ ಸೌಲಭ್ಯವನ್ನು ಬಯಸದೆ, ಹಾವೇರಿಯ ಜನರ ಮನೆಯಲ್ಲಿ ವಾಸ್ತವ್ಯ ಮಾಡಿ ಜನರ ಹತ್ತಿರವಾಗಿರಬೇಕು ಎಂಬ ಅಪೇಕ್ಷೆ ನನ್ನದು. ಯಾವುದೇ ಹಮ್ಮನ್ನು ಇಟ್ಟುಕೊಳ್ಳದೆ ಸಾಮಾನ್ಯವಾಗಿ ದಿನ ನಿತ್ಯದ ಜೀವನ ನಡೆಸುವಂತೆ ಸಮ್ಮೇಳನದ ಸಂದರ್ಭದಲ್ಲಿ ಸ್ಥಳೀಯ ಯಾವುದಾದರೂ ಒಂದು ಮನೆಯಲ್ಲಿ ವಾಸ್ತವ್ಯ ಮಾಡುವ ಇಂಗಿತವಿದೆ. ಅದಕ್ಕಾಗಿ ಹಾವೇರಿಯಲ್ಲಿ ಸಮ್ಮೇಳನ ನಡೆಯುವ ಸ್ಥಳದ ಹತ್ತಿರ ಇರುವ ಅಜ್ಜಯ್ಯನ ದೇವಸ್ಥಾನದ ಸುತ್ತಮುತ್ತಲಿನಲ್ಲಿ ಇರುವ ಯಾವುದಾದರೂ ಮನೆಯವರು ವಾಸ್ತವ್ಯಕ್ಕೆ ಅನೂಕುಲ ಮಾಡಿಕೊಡುಲು ಇಚ್ಛಿಸುವವರು ʻಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ತು ಪಂಪಮಹಾಕವಿ ರಸ್ತೆ, ಚಾಮರಾಜಪೇಟೆ ಬೆಂಗಳೂರುʼ ವಿಶೇಷಾಧಿಕಾರಿ ಸೋಮಶೇಖರ್ ರಾಥೋಡ ಇ-ಮೇಲ್ ವಿಳಾಸ- nadojamj@gmail.com ಸಂಪರ್ಕಿಸಿ, ತಮ್ಮ ಮನೆಯ ವಿಳಾಸವನ್ನು ನೀಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ತಾವು ವಾಸ್ತವ್ಯ ಮಾಡುವ ಮನೆಯಲ್ಲಿ ದಿನಂಪ್ರತಿ ತಯಾರಿಸುವ ಆಹಾರವನ್ನು ಸೇವಿಸುವುದಾಗಿ ಹಾಗೂ ಯಾವುದೇ ರೀತಿಯ ವಿಶೇಷ ಭೋಜನ, ಸವಲತ್ತು ಇತ್ಯಾದಿಗಳನ್ನು ಅಪೇಕ್ಷಿಸುವುದಿಲ್ಲವೆಂದೂ ಸಮ್ಮೇಳನ ನಡೆಯುವ ಸ್ಥಳಕ್ಕೆ ನಡೆದುಕೊಂಡೆ ಹೋಗುವ ವ್ಯವಸ್ಥೆಗೆ ನನ್ನ ಆದ್ಯತೆ ಎಂದೂ ತಿಳಿಸಿದ ಅವರು ಹಾವೇರಿಯಲ್ಲಿ ನಡೆಯುವ ಅಕ್ಷರ ಜಾತ್ರೆಯನ್ನು ಸರಳತೆಯ ಕನ್ನಡದ ಅಸ್ಮಿತೆಯ ಸಮ್ಮೇಳನವನ್ನಾಗಿಸಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

1 × 2 =