Breaking News

ಬೆಳಗಾವಿಯ ಮುತ್ನಾಳ ಕ್ಷೇತ್ರದಲ್ಲಿ ಭಗವಾನ್ ಬಾಹುಬಲಿ 21 ಅಡಿ ಪ್ರತಿಮೆ ಪ್ರತಿಷ್ಠಾಪನೆ

Spread the love

ಬೆಳಗಾವಿಯ ಮುತ್ನಾಳ ಕ್ಷೇತ್ರದಲ್ಲಿ ಭಗವಾನ್ ಬಾಹುಬಲಿ 21 ಅಡಿ ಪ್ರತಿಮೆ ಪ್ರತಿಷ್ಠಾಪನೆ

ಯುವ ಭಾರತ ಸುದ್ದಿ ಬೆಳಗಾವಿ :
ಬೆಳಗಾವಿಯ ತಾಲೂಕಿನ ಮುತ್ನಾಳ ಗ್ರಾಮಕ್ಕೆ ಹೊಂದಿಕೊಂಡಿರುವ ಶ್ರೀ ಕ್ಷೇತ್ರ ಕಾಂಚನಶೃತಿ ವಿದ್ಯಾಸಂಸ್ಥೆ ಅಹಿಂಸಾ ಕ್ಷೇತ್ರದಲ್ಲಿ ಭಗವಾನ್ ಶ್ರೀ ಬಾಹುಬಲಿಯ ಭವ್ಯವಾದ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಯಿತು.
ಕರ್ನಾಟಕದ ಶ್ರವಣಬೆಳಗೊಳ, ಕಾರ್ಕಳ, ಧರ್ಮಸ್ಥಳ, ವೇಣೂರು, ಗೊಮ್ಮಟಗಿರಿ, ಕನಕಗಿರಿ ಕ್ಷೇತ್ರಗಳಲ್ಲಿ ಭಗವಾನ್ ಬಾಹುಬಲಿ ಪ್ರತಿಮೆಗಳನ್ನು ಪ್ರತಿಷ್ಠಾಪಿಸಲಾಗಿದೆ. ಉತ್ತರ ಕರ್ನಾಟಕ ಮತ್ತು ದಕ್ಷಿಣ ಮಹಾರಾಷ್ಟ್ರದಲ್ಲಿ ಈ ತರಹದ ಯಾವುದೇ ಪ್ರತಿಮೆಗಳು ಪ್ರತಿಷ್ಠಾಪನೆ ಆಗಿರಲಿಲ್ಲ. ಇದೀಗ ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳ ಗಡಿಯನ್ನು ಹಂಚಿಕೊಂಡಿರುವ ಬೆಳಗಾವಿ ತಾಲೂಕಿನ ಮುತ್ನಾಳ ಗ್ರಾಮದ ಕ್ಷೇತ್ರದಲ್ಲಿ ಭಗವಾನ್ ಬಾಹುಬಲಿ ಪ್ರತಿಮೆ ಪ್ರತಿಷ್ಠಾಪನೆಯಾಗುತ್ತಿರುವುದು ಈ ಭಾಗದ ಜೈನ ಸಮಾಜದಲ್ಲಿ ಹರ್ಷದ ವಾತಾವರಣ ಮೂಡಿಸಿದೆ.
ಬೆಂಗಳೂರಿನ ಬಿ.ಎಸ್.ನೆಮೇಶ ಮತ್ತು ಜಿ.ಎನ್. ಮೀನ ಅವರ ಏಕೈಕ ಪುತ್ರಿ ಕುಮಾರಿ ಬಿ.ಎನ್. ನಿಶ್ಮಿತ ಅವರು ಚಿಕ್ಕ ವಯಸ್ಸಿನಲ್ಲಿ ಅಕಾಲಿಕ ಸ್ವರ್ಗಸ್ಥ ಹೊಂದಿದ್ದಾರೆ. ಈ ಕಾರಣ ನೆಮೇಶ ಮತ್ತು ಮೀನಾ ದಂಪತಿ ತಮ್ಮ ಪುತ್ರಿಯ ನೆನಪಿನಲ್ಲಿ ಮತ್ತು ಆತ್ಮಶಾಂತಿಗಾಗಿ ಭಗವಾನ್ ಬಾಹುಬಲಿ ಪ್ರತಿಮೆಯನ್ನು ಪ್ರತಿಷ್ಠಾಪಿಸುವ ಸಂಕಲ್ಪವನ್ನು ಮಾಡಿದ್ದರು.
ಈ ಹಿನ್ನೆಲೆಯಲ್ಲಿ ಬೆಳಗಾವಿಯ ಮುತ್ನಾಳ ಗ್ರಾಮದ ಶ್ರೀ ಕ್ಷೇತ್ರ ಕಾಂಚನಶೃತಿ ವಿದ್ಯಾಸಂಸ್ಥೆ ಅಹಿಂಸಾ ಕ್ಷೇತ್ರದಲ್ಲಿ ಭಗವಾನ್ ಬಾಹುಬಲಿ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿದೆ. ಪ್ರತಿಮೆ ಸ್ಥಾಪನೆಗೆ ಪ.ಪೂ.ಕಾಂಚನಶ್ರೀ ಮಾತಾಜಿಗಳು, ಸಂಸ್ಥೆಯ ಅಧ್ಯಕ್ಷ ಪಾರೇಶ ಹುಕ್ಕೇರಿ, ಕಾರ್ಯದರ್ಶಿ ರಾಜೇಂದ್ರ ಪಾಟೀಲ ಅವರು ಸಹಕರಿಸಿ ಎಲ್ಲ ರೀತಿಯ ಸಹಕಾರವನ್ನು ನೀಡಿದ್ದಾರೆ.
ಮುತ್ನಾಳ ಗ್ರಾಮದಲ್ಲಿ ಇದೀಗ ಪ್ರತಿಷ್ಠಾಪನೆಗೊಂಡ ಭಗವಾನ್ ಬಾಹುಬಲಿ ಪ್ರತಿಮೆಯನ್ನು ಬಿಡದಿ ಬಳಿ ಮಾಡಲಾಗಿದೆ. ಅಶೋಕ ಗುಡಿಗಾರ ಅವರು ಕೆತ್ತನೆ ಕೆಲಸವನ್ನು ಮಾಡಿದ್ದು, 21 ಅಡಿ ಎತ್ತರದ ಈ ಪ್ರತಿಮೆಯನ್ನು ಅಶೋಕ ಗುಡಿಗಾರ ಅವರು ಕೆತ್ತನೆ ಕೆಲಸವನ್ನು ಮಾಡಿದ್ದು, ಅಂದಾಜು 40 ಟನ್ ಭಾರ ಹೊಂದಿದೆ. ಈ ಪ್ರತಿಮೆಯ ಪಂಚಕಲ್ಯಾಣ ಮಹೋತ್ಸವ ಮತ್ತು ಭಗವಾನ್ ಬಾಹುಬಲಿ ಮಸ್ತಕಾಭಿಷೇಕ ಕಾರ್ಯಕ್ರಮಗಳು ಮಾರ್ಚ್ 13 ರಿಂದ 17 ರವರೆಗೆ ನಡೆಯಲಿವೆ. ಈ ಪಂಚಕಲ್ಯಾಣ ಮಹೋತ್ಸವ ಮತ್ತು ಮಸ್ತಕಾಭಿಷೇಕದ ಎಲ್ಲ ಖರ್ಚುಗಳನ್ನು ಪ್ರತಿಮೆ ಪ್ರತಿಷ್ಠಾಪಕರಾದ ಬಿ.ಎಸ್.ನೆಮೇಶ ಮತ್ತು ಅವರ ಪತ್ನಿ ಜಿ.ಎನ್.ಮೀನ ಅವರು ವಹಿಸಿಕೊಂಡಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಪಾರೇಶ ಹುಕ್ಕೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

About Yuva Bharatha

Check Also

13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ

Spread the love13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ ಬೆಳಗಾವಿ: “ವಕೀಲರು ನ್ಯಾಯಾಲಯದ …

Leave a Reply

Your email address will not be published. Required fields are marked *

12 + 18 =